ಒಂದು ದಿನ 26 ವರ್ಷದ ಶ್ರೀಮತಿ ಹಂಸಾ (ಹೆಸರು ಬದಲಾಯಿಸಿದೆ) ಅವರಿಗೆ ಹಠಾತ್ತಾಗಿ ಉಸಿರು ನಿಂತಂತಾಗಿ ಸುಮಾರು ಎರಡು ಸಲ ಉಸಿರು ಹೊರಬಿದ್ದಿತು. ಅವರಿಗೆ ಮೂರು ದಿನಗಳ ಹಿಂದೆ ಬಲಗಾಲಿನಲ್ಲಿ ನೋವು, ಊತ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹಂಸಾ ಅವರನ್ನು ತಪಾಸಣೆಗೆ ಒಳಪಡಿಸಿದ ವೈದ್ಯರು ಅವರಿಗೆ ಪಲ್ಮನರಿ ಎಂಬೋಲಿಸಮ್ ಅಂದರೆ ಆಳದ ರಕ್ತನಾಳಗಳಲ್ಲಿ ಕಂಡುಬರುವ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಯಿತು. ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ಚುಚ್ಚುಮದ್ದನ್ನು ನೀಡಲಾಯಿತು.
ಇದಾದ ನಂತರ ಆಕೆ ಕೆಲದಿನಗಳವರೆಗೆ ರಕ್ತದಲ್ಲಿ ಉಂಟಾದ ರಕ್ತ ತೆಳುಗೊಳಿಸುವ ಔಷಧವನ್ನು ತೆಗೆದುಕೊಳ್ಳುವಂತೆ ಸೂಚಿಸಲಾಯಿತು. ಅವರು ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದರು. ಅದರ ಬದಲು ಬೇರೆ ಗರ್ಭನಿರೋಧಕ ಸಾಧನ ಬಳಸಲು ಸೂಚಿಸಲಾಯಿತು. ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವುದರಿಂದ ಮಹಿಳೆಯರಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚುತ್ತದೆ.
ಋತುಬಂಧದ ನಂತರ ತೆಗದುಕೊಳ್ಳುವ ಹಾರ್ಮೋನು ಬದಲಾವಣೆ ಚಿಕಿತ್ಸೆ ಹಾಗೂ ಬಂಜೆತನ ನಿವಾರಣೆ ಚಿಕಿತ್ಸೆ ಸೇರಿದಂತೆ ಕೆಲವು ಚಿಕಿತ್ಸೆಗಳಲ್ಲಿ ನೀಡಲಾಗುವ ಹಾರ್ಮೋನು ಲಸಿಕೆಗಳಿಂದ ಪಲ್ಮನರಿ ಧಮನಿಬಂಧ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಇತ್ತೀಚಿನ ಕೆಲವು ಅಧ್ಯಯನಗಳು ಹೇಳಿವೆ.
ದೇಹದ ಅಣು ಅಣುವಿಗೂ ರಕ್ತ ಪೂರೈಕೆ ಮಾಡಿ, ಅಶುದ್ಧ ರಕ್ತವನ್ನು ಪಡೆದು, ಶುದ್ಧ ರಕ್ತವನ್ನು ಪೂರೈಸುವ ಪ್ರಮುಖ ರಕ್ತನಾಳಗಳ ಪಾತ್ರ ಬಹಳ ದೊಡ್ಡದು. ಅಂಥದ್ದೊಂದು ರಕ್ತನಾಳದೊಳಗೆ ತಡೆ ಉಂಟಾದರೆ ಆಗುವ ಅನಾಹುತ ಊಹಿಸಲಸಾಧ್ಯ. ಜೀವನ ಶೈಲಿಯಿಂದಾಗಿ ಪಲ್ಮನರಿ ಧಮನಿಬಂಧದಿಂದ ಬಳಲುತ್ತಿರುವ ಸಂಖ್ಯೆ ಏರುಮುಖಿಯಾಗಿದೆ.
ಕಾಲಿನಿಂದ ಹೃದಯದತ್ತ ಹೊರಟ ಪಲ್ಮನರಿ ಅಪಧಮನಿಯಲ್ಲಿ ಹೆಪ್ಪುಗಟ್ಟಿದ ರಕ್ತ ಕಣ, ಅಥವಾ ರಕ್ತದ ಹೆಪ್ಪುಗಟ್ಟುವಿಕೆಯಿಂದಾಗಿ ರಕ್ತ ಪರಿಚಲನೆ ಸರಾಗವಾಗುವುದಿಲ್ಲ. ರಕ್ತ ಪರಿಚಲನೆಗೆ ಅಡೆತಡೆ ಉಂಟಾಗುವುದಕ್ಕೆ ಪಲ್ಮನರಿ ಧಮನಿಬಂಧ ಅಥವಾ ಪಲ್ಮನರಿ ಎಂಬೋಲಿಸಂ ಎನ್ನಲಾಗುತ್ತದೆ. ಈ ಸಮಸ್ಯೆಗೆ ಬಲಿಯಾಗುತ್ತಿರುವವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಲಿದೆ ಎನ್ನುವುದೇ ಆಘಾತಕಾರಿ.
ರಕ್ತನಾಳಗಳಲ್ಲಿ ಕಂಡುಬರುವ ರಕ್ತಹೆಪ್ಪುಗಟ್ಟುವಿಕೆಯು ಕಾಲಿನ ಮೀನಖಂಡದಿಂದ ಮೇಲಿರುವ ರಕ್ತನಾಳಗಳಲ್ಲಿ ಊತದ ಮೂಲಕ ಗೋಚರಿಸುತ್ತವೆ. ಹೆಪ್ಪು ಗಟ್ಟಿದ ರಕ್ತದ ಕಣಗಳು ಕ್ರಮೇಣ ಕಿಬ್ಬೊಟ್ಟೆಯ ಮೂಲಕ ಶ್ವಾಸಕೋಶ ತಲುಪುತ್ತವೆ. ಆಗ ಪಲ್ಮನರಿ ಧಮನಿಬಂಧ ಉಂಟಾಗುತ್ತದೆ. ದೀರ್ಘ ಕಾಲದವರೆಗೆ ಹಾಸಿಗೆ ಹಿಡಿದವರು, ಅಪಘಾತದಿಂದ ಹೆಚ್ಚು ಕಾಲ ಮಲಗಿದವರಿಗೆ ಹಾಗೂ ಚಲನ ಶಕ್ತಿ ಕಳೆದುಕೊಂಡವರು ಈ ಸಮಸ್ಯೆಗೆ ತುತ್ತಾಗುವುದು ಹೆಚ್ಚು.
ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರಲು ಇರುವ ಪ್ರಮುಖ ಕಾರಣಗಳೆಂದರೆ ಅತಿಯಾಗಿ ಸೇವಿಸುವ ಗರ್ಭನಿರೋಧಕ ಮಾತ್ರೆ. ಗರ್ಭನಿರೋಧಕ ಮಾತ್ರೆಯು ದೇಹದ ಹಾರ್ಮೋನುಗಳ ಮೇಲೆ ಪ್ರಭಾವ ಬೀರುವುದರಿಂದ ರಕ್ತನಾಳದಲ್ಲಿ ಹಪ್ಪುಗಟ್ಟುವಿಕೆ ಉಂಟಾಗುತ್ತದೆ. ಇದು ಮುಂದೆ ಪಲ್ಮನರಿ ಧಮನಿಬಂಧಕ್ಕೆ ಕಾರಣವಾಗಬಹುದು ಎಂದು ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಹೃದಯಶಸ್ತ್ರಚಿಕಿತ್ಸಾ ತಜ್ಞ ಡಾ. ಶ್ರೀಕಾಂತ ಶೆಟ್ಟಿ ವಿವರಿಸುತ್ತಾರೆ, ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗಿರುತ್ತದೆ.
ಮಗು ಬೆಳೆದಂತೆಲ್ಲ ಕಿಬ್ಬೊಟ್ಟೆಯ ಮೂಲಕ ಹಾದು ಬರುವ ಪಲ್ಮನರಿ ಅಪಧಮನಿ ರಕ್ತನಾಳದ ಮೇಲೆ ಒತ್ತಡ ಹೆಚ್ಚಾಗುವುದರಿಂದಲೂ ಈ ಸಮಸ್ಯೆ ಕಾಡಬಹುದು. ಇದರೊಂದಿಗೆ ಬಂಜೆತನಕ್ಕೆ ಚಿಕಿತ್ಸೆ ಪಡೆಯುವಾಗ ಅಂಡಾಣುಗಳ ಉತ್ಪತ್ತಿಗೆ ನೀಡುವ ಚುಚ್ಚುಮದ್ದುಗಳಿಂದಲೂ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಾಗುತ್ತದೆ. ಋತುಬಂಧದ ವೇಳೆ ದೇಹದಲ್ಲಾಗುವ ಬದಲಾವಣೆಗಳೂ ಇದಕ್ಕೆ ಕಾರಣವಾಗಬಹುದು.
ಗರ್ಭವತಿಯರ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟಬಹುದಾದ ಅಪಾಯ 3ರಿಂದ 4 ಪಟ್ಟು ಹೆಚ್ಚು ಇರುವುದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯು ಸಂಭವಿಸಬಹುದು. ಇವರಲ್ಲಿ ವೀನಸ್ ಕ್ಲಾಟಿಂಗ್ ಸಂಭವಿಸುವ ಪ್ರಮಾಣ 4ರಿಂದ 5 ಪಟ್ಟು ಅಧಿಕ. ಗರ್ಭಾವಸ್ಥೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹಾಗು ಹೆಪ್ಪುಗಟ್ಟಿದ ರಕ್ತದ ದೇಹದ ಮೇಲ್ಬಾಗಕ್ಕೆ ಸ್ಥಳಾಂತರಗೊಳ್ಳುವುದರಿಂದ ಥ್ರೋಂಬೋ ಎಂಬೋಲಿಕ್ನ ಸಂಭವನೀಯತೆಯು ಪ್ರತಿ ಸಾವಿರದ ಪ್ರಸವದಲ್ಲಿ ಎರಡು ಪ್ರಕರಣಗಳು ವರದಿಯಾಗುತ್ತವೆ ಎನ್ನುತ್ತಾರೆ ವೈದ್ಯರು.
‘ಪಲ್ಮನರಿ ಧಮನಿಬಂಧ ಉಂಟಾದಲ್ಲಿ ಕಾಲಿನ ಮೀನಖಂಡ, ತೊಡೆಯಲ್ಲಿ ನೋವು ಹಾಗೂ ಊತ ಉಂಟಾಗುತ್ತದೆ. ಇದು ಆರಂಭಿಕ ಹಂತ. ಇದನ್ನು ನಿರ್ಲಕ್ಷಿಸಿದರೆ ಹೆಪ್ಪುಗಟ್ಟಿದ ರಕ್ತದ ಕಣ ಶ್ವಾಸಕೋಶ ಸೇರುತ್ತದೆ. ಆಗ ಉಸಿರಾಟಕ್ಕೆ ತೊಂದರೆ, ಎದೆ ನೋವು, ಕಣ್ಣಿಗೆ ಕತ್ತಲೆ ಬಂದಂತಾಗುತ್ತದೆ. ಕಫ ಹೆಚ್ಚಾಗುವುದು ಅಥವಾ ಹಠಾತ್ ಕುಸಿತ ಸಹ ಕಂಡುಬರಬಹುದು. ಸೂಕ್ತ ಚಿಕಿತ್ಸೆ ನೀಡದಿದ್ದರೆ ಹಠಾತ್ ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆ’ ಎಂದು ಡಾ. ಶ್ರೀಕಾಂತ್ ಶೆಟ್ಟಿ ಎಚ್ಚರಿಸುತ್ತಾರೆ.
‘ಸಿಟಿ ಸ್ಕ್ಯಾನ್ನಿಂದ ರಕ್ತ ಹೆಪ್ಪುಗಟ್ಟಿರುವುದುನ್ನು ನಿಖರವಾಗಿ ತಿಳಿಯಬಹುದು. ರಕ್ತನಾಳದಲ್ಲಿ ಉಂಟಾದ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿವಾರಿಸಲು ಥ್ರೊಂಬೊಲೈಟ್ ಲಸಿಕೆ ನೀಡಲಾಗುತ್ತದೆ. ನಂತರ ರಕ್ತ ತಿಳಿಗೊಳಿಸುವ ಮಾತ್ರೆ ಸೇವಿಸಬೇಕಾಗುತ್ತದೆ. ಕಿಬ್ಬೊಟ್ಟೆಯಲ್ಲಿ ಉಂಟಾಗುವ ಪಲ್ಮನರಿ ಧಮನಿಬಂಧ ತಡೆಯಲು ಅಲ್ಲಿ ಕೃತಕ ಜಾಲರಿಯನ್ನು ಅಳವಡಿಸಲಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.
ಅದರಲ್ಲೂ ಅಸಹಜವಾಗಿ ರಕ್ತ ಹೆಪ್ಪುಗಟ್ಟುವುದು, ರಕ್ತ ಪ್ರವಾಹದ ರಭಸದಲ್ಲಿ ಇಳಿಕೆ, ನರಗಳಲ್ಲಿ ಹಾನಿಯುಂಟಾಗುವುದು ಈ ಮೂರು ಅಪಾಯಗಳು ಡೀಪ್ ವೇನ್ ಥ್ರೊಂಬೋಸಿಸ್ ಅಥವಾ ಪಲ್ಮನರಿ ಎಂಬೋಲಿಸಮ್ ಉಂಟಾಗುವ ಸಂಭವನೀಯತೆಯನ್ನು ಹೆಚ್ಚಿಸುತ್ತವೆ. ಈ ಅಪಾಯ ಗರ್ಭಾವಸ್ಥೆಯಲ್ಲಿ ಹೆಚ್ಚಾಗಿರುತ್ತವೆ. ಇದಕ್ಕಿರುವ ಕಾರಣಗಳು ಹಲವು. ಥ್ರೊಂಬೋಫಿಲಿಯಾ ಸಮಸ್ಯೆಯು ಅನುವಂಶೀಯವಾಗಿ ಬರಬಹುದು.
ದೀರ್ಘಕಾಲದವರೆಗೆ ಹಾಸಿಗೆ ಹಿಡಿದವರು ಅಥವಾ ಹೆಚ್ಚು ದಿನಗಳ ಕಾಲ ನಡೆದಾಡುವವರು, ಹೈಪರ್ ರೆಮಿಸೆಸ್, ನಿರ್ಜಲೀಕರಣ, ತೀವ್ರ ಸ್ವರೂಪದ ಸೋಂಕು, ರಕ್ತಸಂಚಯದಿಂದ ಹೃದಯ ಸ್ತಂಭನ, ಮೂತ್ರಪಿಂಡದ ತೊಂದರೆ, ಪ್ರೀಕ್ಲಾಂಪ್ಸಿಯಾ, ತೀವ್ರಸ್ವರೂಪದಲ್ಲಿ ಊದಿಕೊಂಡ ನರಗಳು, ಶಸ್ತ್ರಚಿಕಿತ್ಸೆ, ಅಪಘಾತ ಕೂಡಾ ಇದಕ್ಕೆ ಕಾರಣ.
ಈ ಸಮಸ್ಯೆಗೆ ಸರಳ ಪರಿಹಾರವೆಂದರೆ ಹೆಚ್ಚು ನೀರು ಕುಡಿಯ ಬೇಕು. ನಡಿಗೆ ಅತ್ಯುತ್ತಮ ವ್ಯಾಯಾಮ. ದೀರ್ಘ ಕಾಲ ವಿಮಾನದಲ್ಲಿ ಪ್ರಯಾಣ ಮಾಡುವವರು ಕೆಲವು ಸರಳ ವ್ಯಾಯಾಮ ಮಾಡುವುದು ಉತ್ತಮ. ಈಗಾಗಲೇ ಪಲ್ಮನರಿ ಧಮನಿಬಂಧಕ್ಕೆ ಚಿಕಿತ್ಸೆ ಪಡೆದವರು ರಕ್ತ ತೆಳುಗೊಳಿಸುವ ಔಷಧ ಸೇವಿಸಬೇಕು. ನರಗಳಲ್ಲಿ ಊತ ಹಾಗೂ ಕಾಲುಗಳಲ್ಲಿ ನೋವು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಲು ಮರೆಯಬಾರದು ಎನ್ನುತ್ತಾರೆ ಡಾ. ಶ್ರೀಕಾಂತ ಶೆಟ್ಟಿ. (ಮಾಹಿತಿ: 9686860310)
ಕೊನೆಯ ಮಾರ್ಪಾಟು : 7/7/2020