ಸಂಧಿವಾತ (ಆರ್ಥ್ರೈಟಿಸ್)ಈ ತಲೆಮಾರಿನ ಜೀವನ ಶೈಲಿಯಿಂದ ಬರುವ ಕಾಯಿಲೆಗಳಲ್ಲೊಂದು. ಇತ್ತೀಚೆಗೆ 30-35 ವರ್ಷ ದಾಟಿದ ಯಾರನ್ನೇ ಕೇಳಿದರೂ ಸಂಧಿವಾತವೆಂದು ಅಲವತ್ತುಕೊಳ್ಳುವುದನ್ನು ನೋಡುತ್ತೇವೆ. ಅದರಲ್ಲೂ ಭಾರತದಲ್ಲಿ 2.5 ಮಿಲಿಯನ್ನಷ್ಟು ಜನರು ಸಂಧಿವಾತದಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಇದಕ್ಕೆ ಪ್ರಮುಖ ಕಾರಣ ದೈಹಿಕ ಶ್ರಮ ಕಡಿಮೆಯಾಗಿರುವುದು ಎಂಬುದನ್ನು ಇತ್ತೀಚೆಗಿನ ಸಂಶೋಧನೆಯೊಂದು ಸಾಬೀತುಪಡಿಸಿದೆ. ಸಂಧಿವಾತವೆಂದರೆ ಯಾವುದೋ ಒಂದು ನಿರ್ದಿಷ್ಟ ಅಂಗಕ್ಕೆ ಬರುವ ಕಾಯಿಲೆಯಲ್ಲ. ಅದು ದೇಹದ ಕೀಲುಗಳಲ್ಲಿ ಎಲ್ಲಿಯಾದರೂ ಕಾಣಿಸಿಕೊಳ್ಳಬಹುದು. ಇದಕ್ಕೆ ದೇಹವನ್ನು ಹೆಚ್ಚು ಶ್ರಮದ ಕೆಲಸಗಳಿಗೆ ದೂಡದಿರುವುದೇ ಕಾರಣ ಎನ್ನುತ್ತದೆ ಸಂಶೋಧನೆ. ಮೂಳೆಗಳು ಚಟುವಟಿಕೆಯಿಂದಿದ್ದರೆ ಕೀಲು ನೋವು ಕಾಡುವುದಿಲ್ಲ. ಮೂಳೆಗಳಿಗೆ ಅಗತ್ಯವಾದ ಪೋಷಕಾಂಶ ಸಿಗುವಂಥ ಆಹಾರವನ್ನು ಸೇವಿಸದಿರುವುದೂ ಇದಕ್ಕೆ ಕಾರಣ. ಫಾಸ್ಟ್ ಫುಡ್ಗಳಲ್ಲಿ ಮೂಳೆಗಳಿಗೆ ಬೇಕಾದ ಪೋಷಕಾಂಶ ಗಳಿರುವುದಿಲ್ಲ. ಇವು ಮೂಳೆಗಳನ್ನು ಪೊಳ್ಳಾಗಿಸುತ್ತವೆಯೇ ಹೊರತು, ಶಕ್ತಿಶಾಲಿಯನ್ನಾಗಿಸಲಾರವು. ದೇಹ ಬೊಜ್ಜಿನಿಂದ ಬಳಲಿದಷ್ಟೂ ಸಂಧಿವಾತದ ಸಮಸ್ಯೆ ಹೆಚ್ಚುತ್ತದೆ. ಕ್ಯಾಲ್ಷಿಯಂ ಹೆಚ್ಚಿರುವ ಆಹಾರ ಸೇವನೆ ಉತ್ತಮವಾದುದು. ಮಾತ್ರವಲ್ಲ, ಬೊಜ್ಜನ್ನು ಉಂಟುಮಾಡುವಂಥ ಆಹಾರವನ್ನು ಸಂಪೂರ್ಣ ತ್ಯಜಿಸಿಬಿಡುವುದು ಸಂಧಿವಾತ ಸಮಸ್ಯೆಯನ್ನು ಆರಂಭದಲ್ಲೇ ತಡೆಗಟ್ಟಲು ಇರುವ ಉಪಾಯ. ದೇಹಕ್ಕೆ ಯಾವುದೇ ರೀತಿಯ ವ್ಯಾಯಾಮ ಸಿಕ್ಕದಿದ್ದರೆ ಮತ್ತಷ್ಟು ಕೊಬ್ಬು ಶೇಖರಣೆಗೊಳ್ಳುತ್ತದೆ. ಕೊಬ್ಬು ಕರಗಿಸುವುದಕ್ಕಾಗಿ ಮಾಡುವ ವ್ಯಾಯಾಮ ಮೂಳೆಗಳನ್ನು ಬಲಶಾಲಿಯನ್ನಾಗಿ ಮಾಡುವುದಲ್ಲದೆ, ಸದಾ ಚಟುವಟಿಕೆಯಿಂದಿರುವಂತೆ ನೋಡಿಕೊಳ್ಳುತ್ತದೆ. ತಜ್ಞ ವೈದ್ಯರು ಹೇಳುವ ಪ್ರಕಾರ 35 ವರ್ಷದ ಮೇಲ್ಪಟ್ಟವರ್ಯಾರೇ ಕೀಲುನೋವೆಂದು ಬಂದರೂ ಅದು ಸಂಧಿವಾತದ ಸಮಸ್ಯೆಯೇ ಎಂದು ಪರೀಕ್ಷಿಸಲಾಗುತ್ತದೆ. ಅಷ್ಟೇ ಅಲ್ಲ, ಬಹುತೇಕ ಜನರ ವಿಷಯದಲ್ಲಿ ಇದು ನಿಜವೇ ಆಗಿದೆ. ಇಂಥ ರೋಗಿಗಳಿಗೆ ಮೂಳೆಗಳನ್ನು ಸೋಮಾರಿಯಾಗಲು ಬಿಡದೆ ಹೆಚ್ಚು ಚಟುವಟಿಕೆಯಿಂದಿರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಲಾಗುತ್ತದೆ. ಟಿ ಕಂಪೆನಿಗಳಲ್ಲಿ ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚು. ಏಕೆಂದರೆ ಅವರಲ್ಲಿ ದೈಹಿಕ ಶ್ರಮ ಕಡಿಮೆ. ಕೂತಲ್ಲೇ, ಬಹುಗಂಟೆಗಳ ಕಾಲ ಕುಳಿತಿರುವುದರಿಂದ ಮೂಳೆಗಳು ನಿಷ್ಕ್ರಿಯವಾಗಿರುತ್ತವೆ. ಹಲವು ಸಮಯ ಒಂದೇ ಕೋನದಲ್ಲಿ ಕುಳಿತುಕೊಳ್ಳುವುದು, ಪಿಜ್ಜಾ, ಬರ್ಗರ್ ಮುಂತಾದ ಪಾಶ್ಚಾತ್ಯ ಆಹಾರಗಳ ಸೇವನೆ, ವ್ಯಾಯಾಮ ಮಾಡದಿರುವುದು… ಮುಂತಾದುವುಗಳು ಸಂಧಿವಾತಕ್ಕೆ ಪ್ರಮುಖ ಕಾರಣವಾಗಿದೆ.
ಹೆಚ್ಚು ಹೆಚ್ಚು ವ್ಯಾಯಾಮ ಮಾಡುವುದು, ಕ್ರಮಬದ್ಧವಾದ ಜೀವನಶೈಲಿ, ಹಸಿರು ತರಕಾರಿ, ಆಯಾ ಕಾಲಕ್ಕೆ ಸಿಗುವ ಹಣ್ಣುಗಳನ್ನು ಹೆಚಾ್ಚಗಿ ಸೇವಿಸುವುದು, ಎಣ್ಣೆ ಪದಾರ್ಥಗಳನ್ನು ಆದಷ್ಟು ಅಲಕ್ಷಿಸುವುದು ಸಂಧಿವಾತ ಸಮಸ್ಯೆಯನ್ನು ಬಾರದಂತೆ ತಡೆಯುವುದಕ್ಕಿರುವ ಉಪಾಯ
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 3/5/2020