ನಿರ್ಜಲೀಕರಣ ಅಥವಾ ಡಿಹೈಡ್ರೇಶನ್ ಬಿಸಿಲ ಝಳ ಹೆಚ್ಚಿದಂತೆ ಕಾಣಿಸಿಕೊಳ್ಳುವ ಸಮಸ್ಯೆ. ಜ್ವರ, ವಾಂತಿ, ಅಜೀರ್ಣ, ಅತಿಯಾದ ಬಿಸಿಲು, ಹೆಚ್ಚಿನ ದೈಹಿಕ ಶ್ರಮ ಮುಂತಾದವು ದೇಹದಲ್ಲಿನ ನೀರಿನಂಶವನ್ನು ಕಡಿಮೆಗೊಳಿಸುತ್ತವೆ. ಈ ಸಂದರ್ಭದಲ್ಲಿ ವ್ಯಕ್ತಿ ಹೆಚ್ಚಿನ ನೀರನ್ನು ಸೇವಿಸಬೇಕಾಗುತ್ತದೆ. ನಿರ್ಜಲೀಕರಣ ಅತಿಯಾದರೆ ವ್ಯಕ್ತಿ ಪ್ರಾಣಾಪಾಯದಂಚಿಗೂ ಹೋಗಬೇಕಾಗಬಹುದು ಎನ್ನುತ್ತಾರೆ ವೈದ್ಯರು. ಆದ್ದರಿಂದ ಬೇಸಿಗೆಯಲ್ಲಿ ಹೆಚ್ಚು ನೀರು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ನಿರ್ಜಲೀಕರಣದ ಲಕ್ಷಣಗಳನ್ನು ಪತ್ತೆ ಹಚ್ಚುವುದು ಸುಲಭ. ಅತಿಯಾಗಿ ಬಾಯಾರಿಕೆಯಾಗುವುದು, ಬಾಯಿ ಒಣಗಿದಂತಾಗುವುದು, ತಲೆಸುತ್ತುವುದು, ನಿರಾಸಕ್ತಿ, ನಿಶ್ಶಕ್ತಿ, ಆಲಸ್ಯ, ಉರಿಮೂತ್ರ ಮುಂತಾದ ಸಮಸ್ಯೆಗಳು ಆರಂಭವಾದರೆ ಅದು ನಿರ್ಜಲೀಕರಣದ ಲಕ್ಷಣವೇ.
ನಿರ್ಜಲೀಕರಣ ಹೆಚ್ಚಿದಂತೆ ಜ್ವರ, ಅತಿಯಾದ ವಾಂತಿ ಬೇಧಿ, ನಿಶ್ಶಕ್ತಿ,ದೇಹದ ತೂಕದಲ್ಲಿ ಹಠಾತ್ ಕುಸಿತ ಕಾಣಿಸಿಕೊಳ್ಳುತ್ತದೆ. ಮೂತ್ರವಿಸರ್ಜನೆಯೂ ಆಗದಿರಬಹುದು. ಈ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಕಾಣುವುದು ಒಳಿತು. ನಿಮ್ಮ ದೇಹಕ್ಕೆ ಎಷ್ಟು ನೀರು ಅಗತ್ಯವಿದೆಯೋ ಅಷ್ಟನ್ನು ಸೇವಿಸಲೇಬೇಕು. ಅತಿಯಾಗಿ ದೈಹಿಕ ಶ್ರಮಪಡುವವರು ಹೆಚ್ಚು ಹೆಚ್ಚು ನೀರು ಸೇವಿಸಬೇಕು. ಬಿಸಿಲು ಹೆಚ್ಚಾದಂತೆ ದೇಹದಲ್ಲಿನ ನೀರಿನ ಪ್ರಮಾಣ ಬೆವರಿನ ಮೂಲಕ ಹೊರಹೋಗಿರುತ್ತದೆ. ಆದ್ದರಿಂದ ಆ ಸಂದರ್ಭದಲ್ಲಿ ಹೆಚ್ಚು ನೀರು ಸೇವಿಸಿ. ಹಣ್ಣಿನ ರಸ, ಪಾನಕಗಳ ಸೇವನೆಯೂ ಒಳ್ಳೆಯದು. ಬೇಸಿಗೆ ಕಾಲದಲ್ಲಿ ಸಿಗುವ ಹಣ್ಣನ್ನು ಮಾತ್ರ ಸೇವಿಸಿ. ಮುಖ್ಯವಾಗಿ ಕಲ್ಲಂಗಡಿ, ಕಿತ್ತಳೆ, ಮೋಸಂಬಿ, ದ್ರಾಕ್ಷಿ, ಮಾವು… ಇವುಗಳಲ್ಲಿ ನೀರಿನಂಶ ಹೆಚ್ಚಿರುವುದರಿಂದ ದೇಹದಲ್ಲಿ ನೀರಿನಂಶ ಬತ್ತದಂತೆ ಕಾಪಾಡುತ್ತವೆ. ಹಾಗೆಯೇ ನೀರನ್ನು ಸೇವಿಸುವ ಮೊದಲು ಅದು ಶುದ್ಧವಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಿ. ಏಕೆಂದರೆ ಅಶುದ್ಧ ನೀರಿನ ಸೇವನೆಯಿಂದಲೂ ದೇಹ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ತರಕಾರಿಯ ಸೂಪ್ ತಯಾರಿಸಿ ಸೇವಿಸುವುದೂ ಉತ್ತಮ. ಈ ಸಮಯದಲ್ಲಿ ಘನ ಆಹಾರಗಳನ್ನು ಕಡಿಮೆ ಸೇವಿಸುವುದು ಒಳ್ಳೆಯದು. ಹಾಗೆಯೇ ಹೆಚ್ಚು ಖಾರದ ಪದಾರ್ಥವನ್ನು ಸೇವಿಸಬೇಡಿ. ಪ್ರತಿದಿನ ಮಧ್ಯಾಹ್ನ ಊಟವಾದ ತಕ್ಷಣ ಒಂದು ಲೋಟ ಮಜ್ಜಿಗೆ ಸೇವಿಸಿ. ರಾತ್ರಿ ಮಲಗುವ ಅರ್ಧ ಗಂಟೆ ಮೊದಲು ಬೇಸಿಗೆಯಲ್ಲಿ ಸಿಗುವ ಯಾವುದಾದರೂ ಹಣ್ಣಿನ ಜ್ಯೂಸ್ ಸೇವಿಸಿ.
ನಿರ್ಜಲೀಕರಣವೆಂದು ಕಡೆಗಣಿಸದಿರಿ. ಇದು ಪ್ರಾಣಕ್ಕೂ ಅಪಾಯ ತಂದೀತು.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 3/5/2020