ಹೇಗೆ ಭೂಮಿಯ ಹುಟ್ಟಿನ ನಂತರದಲ್ಲಿ ಭೂಮಿಯ ಮೇಲೆ ಜೀವಿಗಳು ಜನ್ಮ ತಳೆಯುತ್ತ ಹೋಗಿ ಮಾನವ ಎನ್ನುವಂತಹ ವಿಕಾಸ ಹೊಂದಿದ ಜೀವಿಯ ಜನನವಾಯಿತೋ ಅಂತೆಯೇ ಮಾನವನ ಹುಟ್ಟಿನ ನಂತರ ಆತನ ಬುದ್ಧಿಮತ್ತೆಯೂ ಸಹ ಸಾವಕಾಶವಾಗಿ ವಿಕಾಸವಾಗುತ್ತ ಬಂದಿತು. ಆತನ ಜೀವನ ಶೈಲಿ ಬದಲಾವಣೆಗೊಂಡಿತು.
ಮೊದಲಿನ ಆಹರ ಪದ್ಧತಿಗೂ ಇಂದಿನ ಆಹಾರಪದ್ಧತಿಗೂ ವ್ಯತ್ಯಾಸಗೊಂಡು ಆರೋಗ್ಯದಲ್ಲಿನ ವ್ಯವಸ್ಥೆಯೂ ಸಹ ವ್ಯತ್ಯಾಸಗೊಂಡಿತು. ಇದರಿಂದಾಗಿ ಶತಾಯುಷ್ಯ ಮಾನವನ ಆಯಸ್ಸು ಕ್ಷೀಣವಾಗುತ್ತ ಬರುತ್ತಿದೆ.
ಹಿನ್ನೆಲೆಯ ಬಗ್ಗೆ ಅಭ್ಯಾಸ ಮಾಡುತ್ತ ಹೋದಲ್ಲಿ ಹಲವಾರು ಸಂಗತಿಗಳು ನಮಗೆ ಗೋಚರವಾಗುತ್ತದೆ. ಅದನ್ನು ನಾವು ಮೂರು ರೀತಿಯಲ್ಲಿ ವಿಂಗಡಿಸಬಹುದಾಗಿದೆ. ಮಾನವನ ಉಗಮದ ಪ್ರಾರಂಭದಲ್ಲಿ ಆತನ ಆಹಾರವನ್ನು ಕೇವಲ ಪ್ರಕೃತಿದತ್ತವಾಗಿ ಸಿಗುವಂತಹ ವಸ್ತುಗಳು ಮಾತ್ರ. ಹಣ್ಣುಗಳು, ಸೊಪ್ಪುಗಳು, ಬೀಜಗಳು, ಮಾಂಸ ಇತ್ಯಾದಿ. ಇದರಿಂದಾಗಿ ದೇಹಕ್ಕೆ ನೈಸರ್ಗೀಕವಾಗಿ ಬೇಕಾದ ಎಲ್ಲ ಪೋಷಕಾಂಶಗಳು ಪ್ರಕೃತಿದತ್ತವಾಗಿ ದೊರಕುತ್ತಿದ್ದು ದೇಹವು ಆರೋಗ್ಯಪೂರ್ಣವಾಗಿರುತ್ತಿತ್ತು. ಹೀಗೆ ಈ ಆಹಾರ ವ್ಯವಸ್ಥೆಯು ಪೂರಕವಾಗಿದ್ದು ದೀರ್ಘಕಾಲೀನ ಸಮಸ್ಯೆಗಳು - ಹೃದಯ ಸಂಬಂಧಿ ತೊಂದರೆ, ಡಯಾಬಿಟಿಸ್, ಕ್ಯಾನ್ಸರ್ನಂತಹ ಮುಂತಾದವುಗಳಿಂದ ಉಂಟಾಗುವ ಮರಣವು ಒಟ್ಟೂ ಮರಣದ ಕೇವಲ ಶೇಕಡಾ 10 ಪ್ರತಿಶತ ಮಾತ್ರ ಆಗಿತ್ತು.
ಆದರೆ ಮುಂದಿನ ಹಂತದಲ್ಲಿ ಮಾನವನ ವಿಕಾಸವಾಗುತ್ತ ಹೋದಂತೆ ಆತನ ಬುದ್ಧಿವಂತಿಕೆಯ ಪರಿಣಾಮದಿಂದಾಗ ‘ಕೃಷಿ ವ್ಯವಸ್ಥೆ’ ಯನ್ನು ಆತ ಅನುಸರಿಸಿ. ಈ ಉತ್ತಮ ಕೃಷಿ ವ್ಯವಸ್ಥೆಯ ಮೂಲಕ ಭತ್ತ, ಗೋಧಿ, ಜೋಳ, ರಾಗಿಯಂತಹ ಹಲವಾರು ಆಹಾರ ಪದಾರ್ಥಗಳ ಅನ್ವಯಿಕ ಆತನ ಆಹಾರ ವ್ಯವಸ್ಥೆಯಲ್ಲಿ ಉಂಟಾಯಿತು. ಇದರಿಂದಾಗಿ ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶವು ದೇಹಕ್ಕೆ ದೊರೆಯತೊಡಗಿತು. ಮೇಲಿಂದಾಗಿ ರುಚಿಗಾಗಿ ಮಾನವನು ಉಪ್ಪನ್ನು ಬಳಸತೊಡಗಿದನು. ಈ ಪ್ರಕ್ರೀಯೆಯು ಮಾನವನಲ್ಲಿ ಬೊಜ್ಜು, ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿ ಖಾಯಿಲೆಯನ್ನು ಉಲ್ಪಣಗೊಳಿಸಿತು. ಹೀಗಾಗಿ ಈ ದೀರ್ಘಕಾಲೀನ ಸಮಸ್ಯೆಗಳಿಂದ ಮರಣ ಹೊಂದುವ ಪ್ರಮಾಣವು ಒಟ್ಟೂ ಮರಣದ 20 ಪ್ರತಿಶತದಷ್ಟಾಯಿತು.
ಅದೇ ರೀತಿ ಮುಂದುವರೆದಂತೆ ದಿನಕಳೆದಂತೆ ಬುದ್ಧಿವಂತಿಕೆಯೆನ್ನುವುದು ಜೀವನಕ್ಕೆ ಅನಿವಾರ್ಯತೆಯಿರುವ ಅಂಶಗಳನ್ನು ಮೀರಿ ಆಸೆ ಎನ್ನುವುದಕ್ಕೆ ಬೆನ್ನು ಬಿದ್ದು ಎಲ್ಲವನ್ನು ಸಾಧಿಸಿಕೊಳ್ಳುವ ಹಪಹಪಿಯ ಜೀವನ ವ್ಯವಸ್ಥೆಯನ್ನು ತಂದೊಡ್ಡಿತು. ಇದರ ಪರಿಣಾಮವನ್ನು ಇಂದು ನಾವು ಅನುಭವಿಸುತ್ತಿದ್ದೇವೆ. ಸುವ್ಯವಸ್ಥಿತ ಜೀವನಶೈಲಿ ಎಂದೆಂದುಕೊಂಡು ಭೋಗ ಜೀವನಕ್ಕೆ ದಾಸರಾಗಿ ಪೌಷ್ಟಿಕ ನೈಸರ್ಗಿಕ ಆಹಾರ ಪದ್ಧತಿಯ ಬದಲು ಆಧುನಿಕ ಅಡ್ಡಪರಿಣಾಮಗಳನ್ನುಂಟು ಮಾಡುವ ಆಕರ್ಷಕ, ಅವ್ಯವಸ್ಥಿತ, ಅವೈಜ್ಞಾನಿಕ ಆಹಾರ ಪದಾರ್ಥಗಳ ಬಳಕೆ ಮಾಡುತ್ತಿದ್ದೇವೆ. ಇದರ ಪರಿಣಾಮವಾಗಿ ಶೇಕಡಾ 50 ಪ್ರತಿಶತ ಮಾನವರು ಈ ದೀರ್ಘಕಾಲೀನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಲ್ಲ ಕಡೆಯೂ ಸಾಮಾನ್ಯವಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಹೃದಯ ಸಂಬಂಧಿತ ತೊಂದರೆಗಳು, ಮುಟ್ಟಿನ ಸಮಸ್ಯೆ ಮುಂತಾದವುಗಳು ಕಂಡುಬರುತ್ತದೆ.
ಹಾಗಾಗಿ ಇವೆಲ್ಲವನ್ನು ಗಮನಿಸಿ ಸ್ವಸ್ಥ ಆರೋಗ್ಯ ವ್ಯವಸ್ಥೆಗಾಗಿ ಪೌಷ್ಟಿಕ, ಪ್ರಕೃತಿದತ್ತವಾದ ಆಹಾರ ಶೈಲಿಯನ್ನು ಅಳವಡಿಸಿಕೊಂಡು ನಮ್ಮ ಅಪೂರ್ಣ, ಹುರುಳಿಲ್ಲದ ಆಹಾರ ಪದ್ಧತಿಯನ್ನು ತ್ಯಜಿಸಿ ನಮ್ಮ ಖಾಯಿಲೆಗಳಿಗೆ, ತೊಂದರೆಗಳಿಗೆ ಸೂಕ್ತ ಚಿಕಿತ್ಸೆಯನ್ನು ಪ್ರಕೃತಿದತ್ತವಾಗಿ, ನೈಸರ್ಗಿಕವಾಗಿ ಪಡೆಯುವ ಸುಲಭ ದಾರಿಯತ್ತ ಪಯಣ ಬೆಳೆಸೋಣ.
ಮೂಲ: ಡಾ|| ವೆಂಕಟ್ರಮಣ ಹೆಗಡೆ
ಕೊನೆಯ ಮಾರ್ಪಾಟು : 2/15/2020