ಅತಿತೂಕವು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ. ಅತಿ ತೂಕದಿಂದಾಗಿ ಮಂಡಿನೋವು, ಸೊಂಟನೋವು, ಹೃದಯ ಸಂಬಂಧಿ ತೊಂದರೆ, ಕೊಲೆಸ್ಟ್ರಾಲ್, ಮಧುಮೆಹ, ಅಧಿಕ ರಕ್ತದೊತ್ತಡ, ಪಿಸಿಒಡಿ, ಮುಟ್ಟಿನ ಸಮಸ್ಯೆ, ಹರ್ನಿಯಾ ಇವು ಹೆಚ್ಚಾಗುತ್ತಿದೆ. ಹಾಗಾಗಿ ತೂಕ ಕಡಿಮೆಮಾಡುವುದರಿಂದಾಗಿ ಈ ಎಲ್ಲ ಸಮಸ್ಯೆಗಳು ಬರುವ ಪ್ರಮೇಯವನ್ನು ತಪ್ಪಿಸಬಹುದು.
ಒಂದು ದೃಷ್ಟಾಂತವು ಇದನ್ನು ಸ್ಪಷ್ಟೀಕರಿಸುತ್ತದೆ. ಒಂದು ಎಕರೆ ತೋಟಕ್ಕೆ ನೀರುಣಿಸಲು 1 ಎಚ್ಪಿ ಪಂಪಿನ ಅವಶ್ಯಕತೆ ಇದೆ. ಅದೇ ಎರಡು ಎಕರೆ ತೋಟಕ್ಕೆ ನೀರುಣಿಸಲು 1 ಎಚ್ಪಿ ಪಂಪ್ ಸಾಲದು. ಅದರ ಸಾಮಥ್ರ್ಯವನ್ನು ಹೆಚ್ಚು ಮಾಡಬೇಕು. ಅಂತೆಯೇ ನಮ್ಮ ಹೃದಯವೂ ಒಂದು ಪಂಪ್ನಂತೆ. ಅದು ರಕ್ತವನ್ನು ಪಂಪ್ ಮಾಡುತ್ತದೆ. ನಮ್ಮ ದೇಹವೂ ತೋಟದಂತೆ. ನಮ್ಮ ಎತ್ತರಕ್ಕನುಗುಣವಾಗಿ ನಮ್ಮ ತೂಕವಿದ್ದರೆ ಹೃದಯದಿಂದ ರಕ್ತಸಂಚಾರ ಸರಿಯಾಗಿ ಆಗುವುದು. ಆದರೆ ನಮ್ಮ ಎತ್ತರಕ್ಕೆ ಅಸಮತೋಲನವಾದ ತೂಕ ಇದ್ದರೆ ಅಥವಾ ಅತಿ ತೂಕ ಉಂಟಾದರೆ ಹೃದಯ ಎನ್ನುವ ಪಂಪ್ಗೆ ಇಡೀ ದೇಹಕ್ಕೆ ಸರಿಯಾದ ರಕ್ತಸಂಚಾರ ಮಾಡಲು ಕಷ್ಟವಾಗುತ್ತದೆ. ತೂಕ ಹೆಚ್ಚಾಗಿದೆ ಎಂದು ಎರಡು ಹೃದಯವನ್ನು ಅಳವಡಿಸಲಾಗದು. ಹೃದಯದ ಸಾಮಥ್ರ್ಯ ಹೆಚ್ಚಿಸಲಾಗದು. ವಯಸ್ಸಾದಂತೆ ಅದು ತನ್ನಷ್ಟಕ್ಕೆ ತಾನೆ ತನ್ನ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತ ಹೋಗುವುದು. ಹಾಗಾಗಿ ಸಮತೋಲನ ಸ್ಥಿತಿಯಲ್ಲಿರುವ ಹೃದಯವನ್ನು ಕಾಯ್ದ್ಸಿರಿಸಲು ನಮ್ಮ ದೇಹಕ್ಕೆ, ಎತ್ತರಕ್ಕೆ ಅನುಗುಣವಾದ ತೂಕವನ್ನು ಹೊಂದಬೇಕು.
ಹಾಗಾದರೆ ಈ ಅತಿತೂಕಕ್ಕೆ ಕಾರಣವೇನು? ಎಂಬುದರತ್ತ ಗಮನಿಸಿದಾಗ ನಾವು ತಲುಪುವುದು ನಮ್ಮ ತಪ್ಪಾದ ಆಹಾರಪದ್ಧತಿ ಹಾಗೂ ತಪ್ಪಾದ ಜೀವನಶೈಲಿ
ಮನುಷ್ಯನ ಹೊರತಾಗಿ ಯಾವುದೇ ಪ್ರಾಣಿಗೂ ಅತಿತೂಕ ಅಥವಾ ಬೊಜ್ಜಿನ ಸಮಸ್ಯೆ ಇಲ್ಲ. ಕೊಲೆಸ್ಟ್ರಾಲ್ ಇಲ್ಲ. ಕಾರಣ ಅವು ನಿಸರ್ಗದತ್ತವಾದ ಅಥವಾ ಸ್ವಾಭಾವಿಕ ಪ್ರಕೃತಿದತ್ತವಾದ ಆಹಾರ ಸೇವಿಸುತ್ತಿದ್ದು ಇದರಿಂದಾಗಿ ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳು ಸರಿಯಾಗಿ ದೊರಕುತ್ತದೆ. ಮೇಲಿಂದ ಅವರ ಚಟುವಟಿಕೆಯುಕ್ತ ಜೀವನಶೈಲಿಯು ಅವರನ್ನು ಆರೋಗ್ಯವಂತರಾಗಿಸಲು ಸಹಕಾರಿಯಾಗುತ್ತದೆ. ಮನುಷ್ಯನೂ ಕೂಡ ಒಂದು ಸಸ್ತನಿ. ಪೂರ್ವಕಾಲದಲ್ಲಿ ನೈಸರ್ಗಿಕ ಆಹಾರವನ್ನು ಸೇವಿಸಿ ಗಟ್ಟಿಮುಟ್ಟಾಗಿ ಆರೋಗ್ಯವಂತರಾಗಿರುತ್ತಿದ್ದರು. ಆದರೆ ನಾವು ಇಂದು ಸೇವಿಸುತ್ತಿರುವ ಜಂಕ್ಪುಡ್ಗಳು, ಕರಿದ ಆಹಾರ ಪದಾರ್ಥಗಳು, ಸಂಸ್ಕರಿತ ಆಹಾರ ಪದಾರ್ಥಗಳು ನಮ್ಮನ್ನು ಹಲವಾರು ಸಮಸ್ಯೆಗಳು ಕಾಡಲು ಕಾರಣ. ಅಲ್ಲದೇ ನಾವು ಕಾರ್ಬೋಹೈಡ್ರೇಟ್ಸ್ಗಳನ್ನು (ಅನ್ನ, ಗೋಧಿ, ಜೋಳ, ರಾಗಿ ಇತ್ಯಾದಿ) ಹೆಚ್ಚು ತೆಗೆದುಕೊಳ್ಳುತ್ತಿದ್ದೇವೆ. ಅದು ನಮ್ಮ ದೇಹದಲ್ಲಿ ಕೊಬ್ಬಾಗಿ ಪರಿವರ್ತನೆಗೊಂಡು ಬೊಜ್ಜಿಗೆ ಕಾರಣವಾಗುತ್ತದೆ. ಅತೀ ತೂಕಕ್ಕೆ ಕಾರಣವಾಗುತ್ತದೆ. ನಮ್ಮ ದೇಹಕ್ಕೆ ಶಕ್ತಿದೊರಕಲು ಬೇಕಾದಷ್ಟು ಕಾರ್ಬೋಹೈಡ್ರೇಟ್ನ್ನು ನಾವು ಸೇವಿಸಿದರೆ ಸಾಕು, ಹಾಗಾಗಿ ಅತಿಯಾಗಿ ಶೇಖರಣೆಗೊಂಡ ಕೆಟ್ಟಕೊಬ್ಬನ್ನು ಕರಗಿಸುವುದು ಅವಶ್ಯ. ಆಗ ಅತಿತೂಕ ಸಮಸ್ಯೆಯು ಕಡಿಮೆಯಾಗುತ್ತದೆ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಕೆಟ್ಟ ಕೊಬ್ಬನ್ನು ಕರಗಿಸಲು ಒಳ್ಳೆಯ ಕೊಬ್ಬು ಸಹಕಾರಿಯಾಗುತ್ತದೆ. ನಟ್ಸ್ಗಳು (ಬಾದಾಮಿ, ಗೋಡಂಬಿ, ಪಿಸ್ತಾ, ಅಕ್ರೂಟ ಮುಂತಾದವುಗಳು) ತೆಂಗಿನಕಾಯಿ ತುರಿ ಇಂತಹವುಗಳನ್ನು ಸೇವಿಸಬೇಕು. ಕಾರ್ಬೋಹೈಡ್ರೇಟ್ಗಳ ಬಳಕೆಯನ್ನು ಕಡಿಮೆ ಮಾಡಬೇಕು.
ಹಣ್ಣುಗಳು, ಸೊಪ್ಪುಗಳು, ಹಸಿತರಕಾರಿಗಳು, ಇಂತಹ ನೈಸರ್ಗಿಕ ಆಹಾರವನ್ನು ಸೇವಿಸಬೇಕು. ಜೊತೆಯಲ್ಲಿ ಪ್ರತಿನಿತ್ಯ ವ್ಯಾಯಾಮ ಅವಶ್ಯಕ. ಇದರಿಂದಾಗಿ ಅತಿತೂಕವನ್ನು ಕಡಿಮೆಗೊಳಿಸಲು ಸಾಧ್ಯ.
ಮೂಲ: ಡಾ|| ವೆಂಕಟ್ರಮಣ ಹೆಗಡೆ
ಕೊನೆಯ ಮಾರ್ಪಾಟು : 3/4/2020