অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

'ಸಕಾರಾತ್ಮಕ ಚಿಂತನೆ' ಯಶಸ್ವಿ ಜೀವನದ ಕೀಲಿ ಕೈ

'ಸಕಾರಾತ್ಮಕ ಚಿಂತನೆ' ಯಶಸ್ವಿ ಜೀವನದ ಕೀಲಿ ಕೈ

ನೇಹಾ ತಾನು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ನಿರಾಶೆಯನ್ನೇ ಅನುಭವಿಸುತ್ತಿದ್ದಳು. ತಾನು ಏನು ಕೆಲಸ ಮಾಡಿದರೂ ಅದರ ಫಲಿತಾಂಶ ತುಂಬಾ ಕೆಟ್ಟದಾಗಿರುತ್ತದೆ ಎಂಬುದು ಅವಳಲ್ಲಿ ಮನೆ ಮಾಡಿತ್ತು. ಇದರಿಂದಾಗಿ ನಿರಾಶೆ, ಜಿಗುಪ್ಸೆ ಹತಾಶೆಯಿಂದ ಅವಳು ದಿನವಿಡೀ ಕೊರಗುತ್ತಿದ್ದಳು. ಇದು ಕೇವಲ ನೇಹಾಳ ವಿಚಾರ ಮಾತ್ರವಲ್ಲ. ಸಕಾರಾತ್ಮಕ ಅಥವಾ ಧನಾತ್ಮಕವಾಗಿ ಆಲೋಚಿಸದಿರುವುದು ನಮ್ಮ ಮಾನಸಿಕ ನೆಮ್ಮದಿಯನ್ನು ಕಂಗೆಡಿಸುತ್ತದೆ. ಒಬ್ಬ ವ್ಯಕ್ತಿ ತಾನು ಮಾಡುವ ಕಾರ್ಯದಲ್ಲಿ ಒಂದೆರಡು ಸಲ ಸೋಲೆಂಬ ನಿರಾಶೆಯನ್ನು ಅನುಭವಿಸಿದ್ದಲ್ಲಿ, ಪ್ರತಿ ಬಾರಿಯೂ ಅವನಿಗೆ ನಿರಾಶೆ ಕಟ್ಟಿಟ್ಟದ್ದು ಎಂಬ ಆಲೋಚನೆಯೇ ಯಶಸ್ಸಿನ ಹಾದಿಯನ್ನು ಮುಚ್ಚುತ್ತದೆ. 

ಮಾನಸಿಕ ತಜ್ಞ ದಿನೇಶ್‌ ಹೇಳುವಂತೆ, ಸಕಾರಾತ್ಮಕ ಆಲೋಚನೆ ಎನ್ನುವುದು ನಮ್ಮ ಮಾನಸಿಕ ಮನೋಭಾವನೆಯಾಗಿದ್ದು ಮನಸ್ಸಿನ ಆಲೋಚನೆಗಳನ್ನು ಇದು ವ್ಯಕ್ತಪಡಿಸುತ್ತದೆ, ಸಕಾರಾತ್ಮಕ ಚಿಂತನೆಯನ್ನು ಪ್ರದರ್ಶಿಸುವ ಶಬ್ಧಗಳು ಮತ್ತು ಚಿತ್ರಗಳು ಯಶಸ್ಸಿನೆಡೆಗೆ ಕರೆದೊಯ್ಯುವಲ್ಲಿ ಸಹಕಾರಿ. ಇದೊಂದು ಮಾನಸಿಕ ಮನೋಭಾವವಾಗಿರುವುದರಿಂದ ಉತ್ತಮವಾಗಿರುವ ಮತ್ತು ಅನುಕೂಲಕರ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ. ಸಕಾರಾತ್ಮಕ ಮನಸ್ಸು ಸಂತೋಷ, ನೆಮ್ಮದಿ, ಆರೋಗ್ಯವನ್ನು ಮತ್ತು ಯಶಸ್ಸನ್ನು ಪ್ರತಿ ಸಂದರ್ಭದಲ್ಲಿ ಮತ್ತು ಕ್ರಿಯೆಯಲ್ಲಿ ಎದುರು ನೋಡುತ್ತದೆ. 

ಮನಸ್ಸು ಏನನ್ನು ನಿರೀಕ್ಷಿಸುತ್ತದೆ ಅದನ್ನು ಹುಡುಕುವುದರಿಂದ ಯಾವಾಗಲೂ ಸಕಾರಾತ್ಮಕ ಆಲೋಚನೆ ನಮ್ಮನ್ನು ಸಂತೋಷವಾಗಿರಿಸುತ್ತದೆ.
ಪ್ರತಿಯೊಬ್ಬರೂ ಸಕಾರಾತ್ಮಕ ಚಿಂತನೆಯಲ್ಲಿ ನಂಬಿಕೆಯನ್ನಿಡುತ್ತಾರೆಂದಲ್ಲ. ಕೆಲವರು ಇದನ್ನು ವ್ಯರ್ಥವೆಂದು ನಂಬುವವರು ಇದ್ದಾರೆ, ಮತ್ತು ಇದನ್ನು ನಂಬುವವರ ಮೇಲೆ ಕೆಲವರು ತಮ್ಮ ಅಸಮಾಧಾನವನ್ನು ಪ್ರದರ್ಶಿಸುತ್ತಾರೆ. 

ಸಕಾರಾತ್ಮಕ ಚಿಂತನೆಯನ್ನು ಇಷ್ಟಪಡುವ ಹೆಚ್ಚಿನವರಿಗೆ ಇದನ್ನು ಪರಿಣಾಮಕಾರಿಯಾಗಿ ಮಾಡಿ ಉತ್ತಮ ಫಲಿತಾಂಶಗಳನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಅರಿವಿರುವುದಿಲ್ಲ. ಯಾರು ತುಂಬಾ ಚಿಂತೆಯಲ್ಲಿರುತ್ತಾರೋ, ಅವರಿಗೆ ಸಕಾರಾತ್ಮಕವಾಗಿ ಆಲೋಚಿಸಿ ಎಂಬ ಮಾತನ್ನು ಜನಸಾಮಾನ್ಯರು ಬಳಸುವುದನ್ನು ನಾವು ಕೇಳಿದ್ದೇವೆ. ಕೆಲವರು ಈ ಮಾತನ್ನು ಪರಿಣಾಮಕಾರಿಯಾಗಿ ತೆಗೆದುಕೊಳ್ಳುವುದಿಲ್ಲ, ಇದರರ್ಥವೇನೆಂದು ಹೆಚ್ಚಿನವರಿಗೆ ತಿಳಿದಿಲ್ಲ, ಇವುಗಳನ್ನು ಪ್ರಯೋಜನಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ಅವರು ತೆಗೆದುಕೊಂಡಿಲ್ಲ. ಸಕಾರಾತ್ಮಕವಾಗಿ ಆಲೋಚಿಸಿ ಎಂಬುದರ ನಿಜವಾದ ಅರ್ಥವೇನೆಂದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ.ಆದರೂ ಇದನ್ನು ನಂಬುವವರ ಸಂಖ್ಯೆ ಅಧಿಕವಾಗುತ್ತಿದೆ ಎಂಬುದು ಹಲವಾರು ಪುಸ್ತಕಗಳಿಂದ, ಅಧ್ಯಯನಗಳಿಂದ, ಉಪನ್ಯಾಸಗಳಿಂದ ತಿಳಿದು ಬಂದಿದೆ.

ಸಕಾರಾತ್ಮಕ ಆಲೋಚನೆಯಿಂದ ದಿನವನ್ನು ಹೇಗೆ ಪ್ರಾರಂಭಿಸುವುದು ಎಂಬುದರ ಬಗೆಗೆ ವಿವರವಾಗಿ ತಿಳಿದುಕೊಳ್ಳೋಣ:

*ಆಲೋಚಿಸುವಾಗ ಮತ್ತು ಮಾತನಾಡುವಾಗ ಯಾವಾಗಲೂ ಸಕಾರಾತ್ಮಕ ಶಬ್ಧಗಳನ್ನೇ ಪ್ರಯೋಗಿಸಿ. ನನ್ನಿಂದ ಸಾಧ್ಯ, ನಾನು ಮಾಡಬಲ್ಲೆ, ಇದು ಸಾಧ್ಯ, ಇದು ಮಾಡಬಹುದು ಇಂತಹ ಮಾತುಗಳನ್ನೇ ಉಪಯೋಗಿಸಿ.

*ಸಂತೋಷವನ್ನು ನೀಡುವ, ಬಲ ಮತ್ತು ಯಶಸ್ಸನ್ನು ಹೆಚ್ಚಿಸುವುದಕ್ಕೆ ಮಾತ್ರ ನಿಮ್ಮ ಅರಿವನ್ನು ಅನುಮತಿಸಿ.

*ಋಣಾತ್ಮತ ಆಲೋಚನೆಗಳನ್ನು ಕೆಡೆಗಣಿಸಿ. ಅಂತಹ ಆಲೋಚನೆಗಳನ್ನು ಮಾಡುವುದನ್ನು ಬಿಡಿ.ಮತ್ತು ಅವುಗಳನ್ನು ಸಂತೋಷ ನೀಡುವಂತಹ ಆಲೋಚನೆಗಳಾಗಿ ಮಾರ್ಪಡಿಸಿ.

*ನಿಮ್ಮ ಸಂಭಾಷಣೆಯ ಪದಗಳು ಭಾವನೆಗಳನ್ನು ಮತ್ತು ಸಾಮರ್ಥ್ಯದ ಮಾನಸಿಕ ಚಿತ್ರಗಳನ್ನು, ಸಂತೋಷವನ್ನು ಮತ್ತು ಯಶಸ್ಸನ್ನು ಪ್ರಚೋದಿಸುವಂತಿರಲಿ.

*ಯಾವುದಾದರೂ ಕ್ರಿಯೆ ಅಥವಾ ಯೋಜನೆಯನ್ನು ಪ್ರಾರಂಭಿಸುವಾಗ, ಅದರ ಯಶಸ್ಸು ಮಾತ್ರ ನಿಮ್ಮ ತಲೆಯಲ್ಲಿರಲಿ. ಏಕಾಗ್ರತೆ ಮತ್ತು ನಂಬಿಕೆಯಿಂದ ಆ ಕೆಲಸವನ್ನು ನೀವು ಮಾಡಿದಾಗ, ಫಲಿತಾಂಶಗಳಿಂದ ನೀವು ಆಶ್ಚರ್ಯ ಹೊಂದುವಿರಿ.

*ಸ್ಫೂರ್ತಿಯನ್ನು ನೀಡುವಂತಹ ಪುಸ್ತಕಗಳನ್ನು ಕನಿಷ್ಟ ಪಕ್ಷ ದಿನದಲ್ಲಿ ಒಂದು ಬಾರಿ ಓದಿ.

*ನಿಮಗೆ ಖುಷಿ ನೀಡುವಂತಹ ಚಲನ ಚಿತ್ರಗಳನ್ನು ವೀಕ್ಷಿಸಿ.

*ವಾರ್ತೆಗಳನ್ನು ಕೇಳಲು ಮತ್ತು ದಿನಪತ್ರಿಕೆಗಳನ್ನು ಓದಲು ಸಮಯ ಮೀಸಲಿಡಿ.

*ಸಕಾರಾತ್ಮಕವಾಗಿ ಆಲೋಚಿಸುವವರೊಂದಿಗೆ ಹೆಚ್ಚು ಬೆರೆಯಿರಿ.

*ದೈಹಿಕ ಚಟುವಟಿಕೆಗಳಾದ ಈಜು, ನಡಿಗೆಯನ್ನು ಪ್ರತಿನಿತ್ಯ ಮಾಡಿ. ಇದು ನಿಮ್ಮಲ್ಲಿ ಸಕಾರಾತ್ಮಕ ಕಾರ್ಯವನ್ನು ಹೆಚ್ಚಿಸುವಲ್ಲಿ ತುಂಬಾ ಸಹಕಾರಿ.ಇಂತಹ ಆಲೋಚನೆಗಳನ್ನು ನೀವು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ತಾನಾಗೆ ನಿಮ್ಮ ಬಳಿ ಬರುತ್ತದೆ.

*ದೇವರ ಸ್ತೋತ್ರ ಪಠನೆಯನ್ನು ಪ್ರತಿನಿತ್ಯವೂ ಮಾಡಿ ಇದರಿಂದ ಶಾಂತಿ ಸಿಗುತ್ತದೆ.

ಶ್ವೇತ ಪಿ.ಎಸ್ ಸುಬ್ರಹ್ಮಣ್ಯ

ಮೂಲ : ವೆಬ್ ದುನಿಯಾ

ಕೊನೆಯ ಮಾರ್ಪಾಟು : 6/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate