অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸ್ವಾಸ್ಥ್ಯ ಸೌಂದರ್ಯ

ಚರ್ಮದ ಕಾಂತಿಗೆ

ಯಾವುದೇ ಆರೈಕೆ ಮಾಡಿಕೊಳ್ಳುವ ಮುನ್ನ ನಿಮ್ಮ ಚರ್ಮ ಯಾವ ಬಗೆಯದು ಎಂದು ಗುರುತಿ­ಸಿಕೊಳ್ಳುವುದು ಒಳಿತು. ಬೆಳಿಗ್ಗೆ ಎದ್ದಾಗ ಎಣ್ಣೆ ಬಸಿಯುವಂತಿದ್ದರೆ ಎಣ್ಣೆ ಚರ್ಮ, ಬಿಗಿದಂತಿದ್ದರೆ ಒಣ ಚರ್ಮ ಹಾಗೂ ಸಾಮಾನ್ಯ­ವಾಗಿದ್ದರೆ ಸಹಜ ತ್ವಚೆ ಎಂದು ಗುರುತಿಸಲಾಗುತ್ತದೆ. ಇದಲ್ಲದೇ ಮೂಗಿನ ತುದಿ ಮತ್ತು ಬದಿಯಲ್ಲಿ ಎಣ್ಣೆ ಬಸಿಯುತ್ತಿದ್ದರೆ ಎಣ್ಣೆ ಚರ್ಮದವರು ಎಂದು ತಿಳಿದುಕೊಳ್ಳಬೇಕು. ನಿಮ್ಮ ಚರ್ಮದ ಗುಣವರಿತು ಆರೈಕೆ ಮಾಡಿಕೊಂಡರೆ ನಿರೀಕ್ಷಿತ ಫಲಿತಾಂಶ ಸಿಗುವುದು ಖಂಡಿತ.

ಸಾಮಾನ್ಯ ಚರ್ಮದವರಿಗೆ

ಸ್ಟ್ರಾಬೆರ್ರಿ ಮತ್ತು ಯೋಗರ್ಟ್‌ ಮಿಶ್ರಣ: ನಾಲ್ಕು ಸ್ಟ್ರಾಬೆರ್ರಿ ಹಣ್ಣುಗಳನ್ನು ಯೋಗರ್ಟ್‌ನೊಂದಿಗೆ ಮಿಶ್ರಮಾಡಿ ಪೇಸ್ಟ್‌ ತಯಾರಿಸಿಕೊಳ್ಳಬೇಕು. ಅದನ್ನು ಮುಖಕ್ಕೆ ಲೇಪಿಸಿ ಒಂದೈದು ನಿಮಿಷ ಬಿಟ್ಟುಬಿಡಿ. ಈ ಮಿಶ್ರಣವು ಮೃತ ಕೋಶಗಳನ್ನು ಹೀರಿಕೊಳ್ಳುತ್ತವೆ. ನಂತರ ಬಿಸಿನೀರಿನಲ್ಲಿ ಅದ್ದಿದ ಬಟ್ಟೆಯಿಂದ ಮುಖಒರೆಸಿಕೊಳ್ಳಬೇಕು.

ಮಾವು ಕೊಬ್ಬರಿಯ ಮಿಶ್ರಣ: ಇದೀಗ ಮಾವಿನ ಋತು ಆರಂಭವಾಗಿದೆ. ಮಾವಿನ ತಿರುಳು ಚರ್ಮಕ್ಕೆ ಹೊಸ ಕಾಂತಿಯನ್ನು ತಂದು ಕೊಡುತ್ತದೆ. ಕೊಬ್ಬರಿ ಹಾಲಿನೊಳಗೆ ಸಕ್ಕರೆ ಕರಗುವಂತೆ ಕದಡಬೇಕು. ನಂತರ ಇದಕ್ಕೆ ಒಂದಷ್ಟುಹನಿ ಲಿಂಬೆರಸ ಬೆರೆಸಬೇಕು. ಈ ಮಿಶ್ರಣಕ್ಕೆ ಮಾವಿನ ತಿರುಳನ್ನೂ ಹಾಕಿ ಪೇಸ್ಟ್‌ ತಯಾರಿಸಿಕೊಳ್ಳಬೇಕು. ಅಂಗೈಗೆ ಹಾಕಿಕೊಂಡು ಮುಖದ ಮೇಲೆ ವರ್ತುಲಾಕಾರದಲ್ಲಿ ಮಸಾಜ್‌ ಮಾಡಿ. ಎರಡು ಮೂರು ನಿಮಿಷಗಳವರೆಗೂ ಈ ಲೇಪನವನ್ನು ಹಾಗೇ ಬಿಡಿ. ನಂತರ ಉಗುರು ಬಿಸಿ ನೀರಿನಿಂದ ತೊಳೆದುಬಿಡಿ.

ಎಣ್ಣೆ ಚರ್ಮದವರಿಗೆ

ತೈಲಚರ್ಮದವರಿಗೆ ಭತ್ತದ ಹೊಟ್ಟಿನ ಮಿಶ್ರಣ ಅತ್ಯುತ್ತಮ ಸ್ಕ್ರಬ್‌ ಆಗುತ್ತದೆ. ಇದು ಪುರಾತನ ಜಪಾನೀಯರ ತಂತ್ರವಾಗಿದೆ. ಚರ್ಮದ ಮೃತಕೋಶಗಳನ್ನು ನಿವಾರಣೆ ಮಾಡಿ, ಚರ್ಮದಲ್ಲಿರುವ ರಂಧ್ರಗಳನ್ನು ತುಂಬುತ್ತದೆ. ನೆರಿಗೆ ಬರುವುದನ್ನು ನಿಯಂತ್ರಿಸುತ್ತದೆ. ಭತ್ತದ ಹೊಟ್ಟನ್ನು ಹಾಲಿನೊಂದಿಗೆ ಮಿಶ್ರಣ ಮಾಡಿಕೊಂಡು ಲೇಪನದಂತೆ ಬಳಸಿ. ಮೂರು ನಾಲ್ಕು ನಿಮಿಷಗಳ ನಂತರ ಇದನ್ನು ತೊಳೆದರೆ ಸಾಕು.

ಸಿಟ್ರಸ್‌ ಪೇಸ್ಟ್‌

ಕಿತ್ತಲೆಯ ಒಣಗಿಸಿದ  ಸಿಪ್ಪೆ ಅರ್ಧ ಕಪ್‌, ನಿಂಬೆಯ ಒಣಗಿಸಿದ ಸಿಪ್ಪೆ ಅರ್ಧ ಕಪ್‌. ಓಟ್‌ ಮೀಲ್‌ ಅರ್ಧ ಕಪ್‌, ಅರ್ಧ ಕಪ್‌ ಬದಾಮಿ. ಇವೆಲ್ಲವನ್ನು ನುಣ್ಣನೆಯ ಪುಡಿಯಾಗಿಸಿಟ್ಟುಕೊಳ್ಳಿ. ಅಗತ್ಯವಿದಷ್ಟು ಅಳತೆಯ ಪುಡಿಯನ್ನು ನೀರಿನೊಂದಿಗೆ ಮಿಶ್ರಣ ಮಾಡಿ, ಮುಖಕ್ಕೆ ಲೇಪಿಸಿಕೊಳ್ಳಿ. ನಂತರ ಅದನ್ನು ಉಗುರು ಬಿಸಿ ನೀರಿನಿಂದ ತೊಳೆದುಕೊಳ್ಳಬೇಕು.

ವಾರಕ್ಕೆ ಒಮ್ಮೆ ಈ ಚಿಕಿತ್ಸೆ ಮಾಡಿಕೊಂಡರೆ ಚರ್ಮ ನಳನಳಿಸುತ್ತದೆ. ಆದರೆ ಮೂವತ್ತರ ಅಂಚನ್ನು ದಾಟಿದ ನಂತರ ಆರು ವಾರಗಳಿಗೆ ಒಮ್ಮೆ ಸೌಂದರ್ಯ ತಜ್ಞರ ಬಳಿ, ಕ್ಲೀನಿಂಗ್‌, ಬ್ರಷಿಂಗ್, ಫೇಷಿಯಲ್‌ ಮುಂತಾದ ಆರೈಕೆಗಳೂ ಅತ್ಯಗತ್ಯ. ಈ ಆರೈಕೆಯಿಂದ ಚರ್ಮದ ಮೃತಕೋಶಗಳ ನಿವಾರಣೆಯಾಗುತ್ತದೆ. ಹೊಸ ಕೋಶಗಳು ಹುಟ್ಟುವಂತಾಗುತ್ತವೆ. ರಕ್ತ ಪರಿಚಲನೆ ಸರಾಗವಾಗುತ್ತದೆ.(ಮಾಹಿತಿಗೆ: 7676757575)

ಮೂಲ :ಡಾ.ಚೈತ್ರಾ ವಿ. ಆನಂದ ಕಾಸ್ಮೊಡರ್ಮ ಸ್ಕಿನ್ ಅಂಡ್ ಹೇರ್ ಕ್ಲಿನಿಕ್ ಪ್ರಜಾವಾಣಿ

ಕೊನೆಯ ಮಾರ್ಪಾಟು : 7/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate