ಆಲೂಗಡ್ಡೆ ಬಹುಪಾಲು ಎಲ್ಲರೂ ಇಷ್ಟಪಡುವ ತರಕಾರಿ. ಅದೆಷ್ಟು ಬಗೆಯ ತಿನಿಸುಗಳನ್ನು ಆಲೂಗಡ್ಡೆಯಿಂದ ತಯಾರಿಸುತ್ತಾರೋ ಲೆಕ್ಕವಿಲ್ಲ. ಆಲೂಗಡ್ಡೆ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಅದನ್ನು ಸೇವಿಸುವುದರಿಂದ ದಪ್ಪವಾಗುತ್ತೇವೆ ಎಂಬ ಭಾವನೆ ಹಲವರಲ್ಲಿರಬಹುದು. ಆದರೆ ಆಲೂಗಡ್ಡೆಯನ್ನು ಸಿಪ್ಪೆಯ ಸಮೇತ ತಿನ್ನುವುದರಿಂದ ತೂಕ ಕಡಿಮೆಯಗುತ್ತದೆಯೆಂದು ಇತ್ತೀಚಿನ ಸಂಶೋಧನೆಯೊಂದು ದೃಢಪಡಿಸಿದೆ.
ಆಲೂಗಡ್ಡೆಯ ಸಿಪ್ಪೆಯಲ್ಲಿರುವ ಕಡಿಮೆ ಕೊಬ್ಬಿನಂಶ ಮತ್ತು ಸೋಡಿಯಂ ಇದಕ್ಕೆ ಕಾರಣ. ವಿಟಾಮಿನ್ ಸಿ ಈ ಸಿಪ್ಪೆಯಲ್ಲಿ ಹೆಚ್ಚಾಗಿರುವ ಕಾರಣ ಸಿ ಜೀವಸತ್ವದ ಕೊರತೆಯಿಂದ ಬಳಲುತ್ತಿರುವವರು ಆಲೂಗಡ್ಡೆಯನ್ನು ಸಿಪ್ಪೆಯೊಂದಿಗೆ ಸೇವಿಸುವುದು ಒಳ್ಳೆಯದು.
ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಕ್ಯಾಲ್ಷಿಯಂ ಪ್ರಮಾಣ ಸಹ ಹೆಚ್ಚಾಗಿರುವುದಲ್ಲದೆ ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ಹೊಂದಿದೆ.
ಆಲೂಗಡ್ಡೆಯ ಸಿಪ್ಪೆಯಲ್ಲಿರುವ ಕ್ಲೊರೋಜೆನಿಕ್ ಆಮ್ಲ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಕ್ಯಾರ್ಸಿನೊಜೆನ್ ಎಂಬ ಅಂಶದ ವಿರುದ್ಧ ಹೋರಾಡುವ ಸಾಮರ್ಥ್ಯ ಪಡೆದಿದೆ.
ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಿಸುವ ಶಕ್ತಿ ಆಲೂ ಸಿಪ್ಪೆಗಿದೆ. ರಕ್ತದೊತ್ತಡವನ್ನು ಹತೋಟಿಯಲ್ಲಿಡುವ ಶಕ್ತಿ ಇದಕ್ಕಿರುವುದರಿಂದ ಹೃದಯಾಘಾತ ಮತ್ತು ಪಾರ್ಶ್ವಾಘಾತವಾಗದಂತೆ ನೋಡಿಕೊಳ್ಳುತ್ತದೆ.
ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಸಮತೋಲನದಲ್ಲಿರುವಂತೆ ನೋಡಿಕೊಳ್ಳುವಲ್ಲಿ ಇದು ಸಹಕಾರಿಯಾಗಿದೆ.
ಚರ್ಮದ ಹೊಳಪನ್ನು ಹೆಚ್ಚಿಸುವಲ್ಲಿ ಆಲೂಗಡ್ಡೆಯ ಸಿಪ್ಪೆ ಮಹತ್ವದ ಪಾತ್ರ ವಹಿಸಿದೆ. ಸುಟ್ಟ ಕಲೆ, ಗಾಯಗಳನ್ನು ವಾಸಿ ಮಾಡುವಲ್ಲಿಯೂ ಆಲೂಗಡ್ಡೆಯ ಸಿಪ್ಪೆ ಉಪಕಾರಿ.
ಕಣ್ಣಿನ ಸುತ್ತ ಉಂಟಾಗುವ ಕಪ್ಪುಕಲೆಯನ್ನು ನಿವಾರಿಸುವಲ್ಲಿಯೂ ಇದರ ಪಾತ್ರ ಅಪಾರ.
ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಭಯದಿಂದಾಗಿ ಇಂದು ಯಾವುದೇ ತರಕಾರಿ ಮತ್ತು ಹಣ್ಣುಗಳನ್ನು ಸಿಪ್ಪೆಯನ್ನು ತೆಗೆದೇ ಉಪಯೋಗಿಸಲಾಗುತ್ತದೆ. ಆದರೆ ವಾಸ್ತವವೇನೆಂದರೆ ಹಲವು ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯಲ್ಲಿಯೇ ಹೆಚ್ಚು ಸತ್ವವಿರುತ್ತದೆ. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಹಣ್ಣು-ತರಕಾರಿಗಳನ್ನು ಸಿಪ್ಪೆ ಸಮೇತವೇ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.
ಆದರೆ ಹೀಗೆ ಸಿಪ್ಪೆ ಸಮೇತ ತಿನ್ನುವ ಮೊದಲು ಕಾಯಿಪಲ್ಲೆಯನ್ನು ಶುದ್ಧವಾದ ನೀರಲ್ಲಿ ತೊಳೆದುಕೊಳ್ಳಬೇಕು. ಇಲ್ಲವೆಂದರೆ ರೋಗಾಣುಗಳು ದೇಹವನ್ನು ಸೇರಬಹುದು ಅಥವಾ ಕೀಟನಾಶಕಗಳಲ್ಲಿದ್ದ ರಾಸಾಯನಿಕಗಳೂ ದೇಹವನ್ನು ಸೇರಿ ದೇಹದ ಆರೋಗ್ಯವನ್ನು ಹಾಳು ಮಾಡಬಹುದು. ಆದ್ದರಿಂದ ಸಿಪ್ಪೆ ಸಮೇತ ಹಣ್ಣು, ತರಕಾರಿಗಳನ್ನು ತಿನ್ನುವಾಗ ಎಚ್ಚರಿಕೆ ವಹಿಸಿ.
-ಶಶಿ
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 2/15/2020