ಅಕ್ಕಿಯ ಮೇಲಿನ ನಯವಾದ ತೌಡನ್ನು ಕೋಸುಂಬರಿ ಅಥವಾ ಪಲ್ಯದೊಂದಿಗೆ ಬೆರೆಸಿ ಸೇವಿಸುವುದರಿಂದ, ತೌಡು ತೆಗೆದ ಅಕ್ಕಿ ಸೇವಿಸುವುದರಿಂದ, ಪ್ರಾಪ್ತವಾಗುವ ರೋಗರುಜಿನಗಳ ಭಯ ತಪ್ಪುವುದು.
ತೌಡಿನಿಂದ ರುಚಿಕಟ್ಟಾದ ಆರೋಗ್ಯವರ್ಧಕ ಪಾನೀಯ ತಯಾರಿಸಿ ಸೇವಿಸಬಹುದು; ಎರಡು ಬಟ್ಟಲು ನಯವಾದ ಅಕ್ಕಿ ತೌಡಿನ ಮೇಲೆ ಆರು ಬಟ್ಟಲು ಕುದಿಯುವ ನೀರು ಸುರಿದು ಮುಚ್ಚಿಡಿ. ಮೂರು ಗಂಟೆಗಳ ನಂತರ ಶುಭ್ರವಾದ ಬಟ್ಟೆಯಿಂದ ಶೋಧಿಸಿ, ನಂತರ ಆ ದ್ರಾವಣವನ್ನು ಕುದಿಹತ್ತುವ ವರೆಗೆ ಕಾಯಿಸಿ; ಸ್ವಲ್ಪ ನಿಂಬೆ ರಸ ಮತ್ತು ಉಪ್ಪು ಸೇರಿಸಿ. ತಯಾರಾದ ಪಾನೀಯವು ಮಂದವಾಗಿದ್ದರೆ ಸಾಕಷ್ಟು ಕುದಿಯುವ ನೀರು ಬೆರೆಸಿ ತೆಳುವಾಗಿ ಮಾಡಿ. ಇದನ್ನು ದಿನಕ್ಕೆ ಮೂರಾವರ್ತಿ ಒಂದು ಬಟ್ಟಲಿನಷ್ಟು ಸೇವಿಸಿ. ಶಕ್ತಿವರ್ಧನೆಗೆ ಇದು ಅತ್ಯುತ್ತಮ ಪಾನೀಯ.
ಚೆನ್ನಾಗಿ ಮಾಗಿದ ಅನಾನಸ್ ಹಣ್ಣಿನ ರಸ ಸೇವಿಸುವುದರಿಂದ ಹೊಟ್ಟೆಯಲ್ಲಾಗುವು ಉರಿ, ಸಂಕಟ ಶಮನವಾಗುವುದು; ಉರಿಮೂತ್ರ ಗುಣವಾಗುವುದು; ಮೂತ್ರಕಟ್ಟು ನಿವಾರಣೆಯಾಗುವುದು; ಜೀರ್ಣಶಕ್ತಿ ಹೆಚ್ಚುವುದು. ಪ್ರತಿ ದಿನವೂ ಅನಾನಸ್ ಹಣ್ಣಿನ ರಸವನ್ನು ರೋಗಗ್ರಸ್ತ ಚರ್ಮದ ಮೇಲೆ ಲೇಪಿಸುತ್ತಿದ್ದರೆ ಚರ್ಮವ್ಯಾಧಿಗಳಲ್ಲಿ ವಿಶೇಷ ಗುಣ ಕಂಡುಬುರುವುದು.
ಒಣದಾಕ್ಷಿಯನ್ನು ಉಗುರು ಬೆಚ್ಚಗಿರುವ ನೀರಿನಲ್ಲಿ ನೆನೆಹಾಕಿ. ಏಳೆಂಟು ಗಂಟೆಗಳ ತರುವಾಯ ದ್ರಾಕ್ಷಿಯನ್ನು ಚೆನ್ನಾಗಿ ಕಿವುಚಿ ಶೋಧಿಸಿ. ಹೀಗೆ ತಯಾರಿಸಿದ ದ್ರಾಕ್ಷಿ ಪಾನಕ ಸೇವಿಸುವುದರಿಂದ ರಕ್ತ ಶುದ್ಧಿಯಾಗುವುದು ಮತ್ತು ವೃದ್ಧಿಯಾಗುವುದು.
ಒಂದು ಬಟ್ಟಲು ಬಿಸಿ ನೀರಿನಲ್ಲಿ ಹಿಡಿ ದ್ರಾಕ್ಷಿಯನ್ನು ಚೆನ್ನಾಗಿ ಕಿವುಚಿ ಶೋಧಿಸಿ ಕುಡಿಯುವುದರಿಂದ ಜ್ವರದ ತಾಪ ಕಡಿಮೆಯಾಗುವುದು. ಸಾಧಾರಣ ಜ್ವರದಲ್ಲಿ ಗಂಟೆಗೊಂದು ಬಾರಿ ಈ ಪಾನಕ ಸೇವಿಸುತ್ತಿದ್ದರೆ ಜ್ವರ ನಿಲ್ಲುವುದು.
ಅಜೀರ್ಣ ನಿವಾರಣೆಗೆ ಅಂಜೂರ ಅತ್ಯುತ್ತಮ ಆಹಾರ. ಸ್ವಲ್ಪ ನೀರಿನಲ್ಲಿ ಏಳೆಂಟು ಅಂಜೂರದ ಹಣ್ಣುಗಳನ್ನು ನೆನೆಹಾಕಿ. ಮರುದಿನ ಬೆಳಗ್ಗೆ ಆ ನೀರನ್ನು ಕುಡಿದು ಅಂಜೂರದ ಹಣ್ಣುಗಳನ್ನು ಸೇವಿಸಿ. ಅಜೀರ್ಣ ನಿವಾರಣೆಯಾಗಿ ದೇಹ ಹಗುರವಾಗುವುದು. ಅಂಜೂರ ಸೇವಿಸುವುದರಿಂದ ರಕ್ತ ಶುದ್ಧಿಯಾಗುವುದು. ನರಗಳ ದೌರ್ಬಲ್ಯ ನಿವಾರಣೆಯಾಗುವುದು.
ಚಿಲುಮೆಯ ನೀರಿನಲ್ಲಿ ಆರೋಗ್ಯ ವರ್ಧಕ ಖನಿಜಗಳಿರುವುವು. ಈ ನೀರಿನ ಸ್ನಾನದಿಂದ ಹಲವು ಚರ್ಮ ರೋಗಗಳು ಗುಣವಾಗುವುವು. ಹಾಗೂ ನೀರಿನ ಪಾನದಿಂದ ಜಠರ ಮತ್ತು ಕರುಳಿಗೆ ಸಂಬಂಧಿಸಿದ ರೋಗಗಳು ಗುಣವಾಗುವುವು.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 5/28/2020