অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಕ್ಕಳ ಚಾಚ ನೆಹರು

ಜವಾಹರರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ.ಮಕ್ಕಳೊಡನೆ ಆಟವಾಡುವುದೆಂದರೆ ಆನಂದ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತ ವಿದ್ದಾಗಲೂ ಅವರು ಮಕ್ಕಳೊಡನೆ ಆಡುವ ಪ್ರಸಂಗ ತಪ್ಪಿಸುತ್ತಿರಲಿಲ್ಲ. ಯಾವುದೇ ಸಭೆಗೆ ಹೋಗಿರಲಿ, ಎಷ್ಟೇ ಅವಸರದ ಕಾರ್ಯಕ್ರಮವಿರಲಿ ಅವರು ಮಕ್ಕಳನ್ನು ನೋಡಿದ ಕೂಡಲೆ ಎತ್ತಿ ಮುದ್ದಾಡುತ್ತಿದ್ದರು. ''ನಿಜವಾದ ಜವಾಹರರನ್ನು ನೋಡಬೇಕಾದರೆ ಅವರು ಮಕ್ಕಳೊಂದಿಗೆ ಇರುವಾಗ ನೋಡಬೇಕು. ಮಕ್ಕಳಂತೆಯೇ ಮಾತನಾಡಿ, ಅವರ ಹಾಗೆಯೇ ಆಟವಾಡಿ ನಲಿದು ಆನಂದಪಡುತ್ತಾರೆ'' ಎಂದು ಅವರ ತಂಗಿ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರು ಹೇಳಿದ್ದಾರೆ. ನವೆಂಬರ್ 14 ನಮ್ಮ ದೇಶದ ಒಬ್ಬ ಮಹಾಪುರುಷರಾದ ಪಂಡಿತ ಜವಾಹರ್‌ಲಾಲ್ ನೆಹರು ಅವರ ಜನ್ಮದಿನ. ಅಂದು ಭಾರತದಲ್ಲೆಲ್ಲ 'ಮಕ್ಕಳ ದಿನ' ಎಂದು ಸಂಭ್ರಮದಿಂದ ಪ್ರತಿವರುಷ ಆಚರಿಸುತ್ತೇವೆ. ಜವಾಹರರನ್ನು ಮಕ್ಕಳು 'ಚಾಚಾ ನೆಹರೂ' ಎಂದು ಪ್ರೀತಿ-ಗೌರವಗಳಿಂದ ಕರೆಯುತ್ತಾರೆ. ಚಾಚಾ ಎಂದರೆ ಚಿಕ್ಕಪ್ಪ.
ನೆಹರು ಅವರ ಪೂರ್ವಜರ ಹೆಸರು 'ನೆಹರು' ಆಗಿದ್ದಿರಲಿಲ್ಲ. ಅವರ ಪೂರ್ವಜರು ಕಾಶ್ಮೀರದಲ್ಲಿದ್ದರು. ಅವರಿಗೆ 'ರಾಜಕೌಲ'  ಎಂಬ ಹೆಸರಿತ್ತು. ಪಂಡಿತ ರಾಜಕೌಲರು ಸಂಸ್ಕೃತ-ಫಾರಸೀ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಕ್ರಿ.ಶ. 1716ರಲ್ಲಿ ದಿಲ್ಲಿಯ ಮೊಗಲದೊರೆ ಫರುಕ್ಸಿಯರನು ಕಾಶ್ಮೀರಕ್ಕೆ ಭೆಟ್ಟಿ ಕೊಟ್ಟಾಗ ಪಂಡಿತ ರಾಜಕೌಲರನ್ನು ದಿಲ್ಲಿಗೆ ಕರೆತಂದು ನಗರದ ನಡುವೆ ಹರಿಯುತ್ತಿದ್ದ ಕಾಲುವೆಯ ಪಕ್ಕದಲ್ಲಿ ಮನೆ ಕಟ್ಟಿಸಿಕೊಟ್ಟನು. ಕಾಲುವೆಗೆ ಹಿಂದಿ ಭಾಷೆಯಲ್ಲಿ 'ನಹರ್' ಎನ್ನುತ್ತಾರೆ. ಹೀಗಾಗಿ 'ನಹರ್' ಪಕ್ಕದ ಮನೆಯವರು 'ನೆಹರೂ' ಆದರು.

ಬಾಲ್ಯ-ವಿದ್ಯಾಭ್ಯಾಸ


ಮೋತೀಲಾಲರು ಕಲಿತು ದೊಡ್ಡವರಾಗಿ ಅಲಹಾಬಾದಿನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ ಅಪಾರ ಕೀರ್ತಿ ಮತ್ತು ಹಣ ಗಳಿಸಿದರು. ಜವಾಹರರು ಹುಟ್ಟಿದ್ದು 1889ನೇ ನವಂಬರ 14 ರಂದು. ತಾಯಿ ಸ್ವರೂಪರಾಣಿ. ವೈಭವದ ಜೀವನ ಶ್ರೀಮಂತ ತಂದೆಯ ಒಬ್ಬನೇ ಮಗನಾದ ಜವಾಹರರು ರಾಜಕುಮಾರನಂತೆ ಅತ್ಯಂತ ಸುಖದಿಂದ ಬೆಳೆದರು. ಮೋತೀಲಾಲರು ಹೊಸದಾಗಿ ಕಟ್ಟಿಸಿದ 'ಆನಂದಭವನ' ವೆಂಬ ಹೆಸರಿನ ಮನೆಯು ಅರಮನೆಯಂತೆಯೇ ಇತ್ತು.
ಮೋತೀಲಾಲರು ಸಿಟ್ಟಿನ ಸ್ವಭಾವದವರು. ಜವಾಹರರಿಗೆ ಅವರ ಬಗ್ಗೆ ಹೆದರಿಕೆಯಿತ್ತು. ಒಮ್ಮೆ ಜವಾಹರರು ಚೆನ್ನಾಗಿ ಪೆಟ್ಟು ತಿಂದರು. ಆದದ್ದು ಇಷ್ಟೇ. ಮೋತೀಲಾಲರ ಕೋಣೆಯಲ್ಲಿ ಮೇಜಿನ ಮೇಲೆ ಎರಡು ಪೆನ್ನುಗಳಿದ್ದವು. ಅವನ್ನು ನೋಡಿದಾಗ ಬಾಲಕ ಜವಾಹರರು ''ಎರಡು ಪೆನ್ನುಗಳಿಂದ ಯಾರಾದರೂ ಬರೆಯುತ್ತಾರೆಯೇ, ಒಂದನ್ನು ನಾನು ಇಟ್ಟುಕೊಂಡರೆ ತಪ್ಪೇನು?'' ಎಂದು ಆಲೋಚಿಸಿ ಒಂದನ್ನು ತೆಗೆದುಕೊಂಡರು. ಆ ಬಳಿಕ ತಂದೆ ಪೆನ್ನು ಕಾಣದೆ ಎಲ್ಲರನ್ನು ಕೇಳಿದರು. ಮಗನನ್ನು ಕೇಳಿದಾಗ ತಾನು ತೆಗೆದುಕೊಂಡಿಲ್ಲವೆಂದ. ಆದರೆ ಹುಡುಕಿದಾಗ ಮಗನ ಬಳಿ ಸಿಕ್ಕಿಬಿಟ್ಟಿತು. ಮಗನಿಗೆ ಚೆನ್ನಾಗಿ ಏಟುಬಿದ್ದವು!
ಹೀಗೆ ಸಿಟ್ಟಿನ ಸ್ವಭಾವವಿದ್ದರೂ ತಂದೆಗೆ ಮಗನ ಮೇಲೆ ಬಹಳ ಪ್ರೇಮವಿತ್ತು. ಮಗನಿಗೆ ಒಳ್ಳೆ ಶಿಕ್ಷಣ ಕೊಡಿಸಬೇಕೆಂದು ಮನೆಯಲ್ಲಿಯೇ ಉತ್ತಮ ಶಿಕ್ಷಕರನ್ನಿಟ್ಟರು. ಆಗಿನ ಕಾಲದ ವಿದ್ಯಾವಂತರಂತೆ ಮೋತೀಲಾಲರಿಗೂ ಇಂಗ್ಲಿಷ್ ಭಾಷೆಯ ಬಗ್ಗೆ ಬಹಳ ಮೋಹವಿತ್ತು. ಅದಕ್ಕಾಗಿ ಮಗನಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸಲು ಫರ್ಡಿನೆಂಡ್ ಬ್ರುಕ್ಸ್ ಎಂಬುವನನ್ನು ನೇಮಿಸಿದ್ದರು. ಆತನು ಜವಾಹರರಲ್ಲಿ ಒಳ್ಳೊಳ್ಳೆಯ ಪುಸ್ತಕ ಓದುವ ರುಚಿ ಹುಟ್ಟಿಸಿದ. ಈ ರುಚಿಯು ಜವಾಹರರಿಗೆ ವಿದ್ಯಾರ್ಥಿಯಾಗಿದ್ದಾಗ ಮತ್ತು ಮುಂದೆಯೂ ಬಹಳ ಸಹಾಯಕವಾಯಿತು. ಚಿಕ್ಕಂದಿನಲ್ಲಿ ಜವಾಹರರೊಡನೆ ಆಟವಾಡಲು 'ಆನಂದಭವನ' ದಲ್ಲಿ ಸಣ್ಣ ಹುಡುಗರು ಇರಲಿಲ್ಲ. ಅವರ ತಂಗಿ ಸ್ವರೂಪಕುಮಾರಿ-ಮುಂದೆ ಶ್ರೀಮತಿ ವಿಜಯಲಕ್ಷಿ  ಪಂಡಿತ್ ಎಂದು ಹೆಸರಾದರು – ಹುಟ್ಟದ್ದು 1900ರ ಆಗಸ್ಟ್ 18 ರಂದು. ಕಿರಿಯ ತಂಗಿ ಕೃಷ್ಣಾ-ಮುಂದೆ ಶ್ರೀಮತಿ ಕಷ್ಣಾ ಹಥೀಸಿಂಗ-ಹುಟ್ಟಿದ್ದು ೧೯೦೭ ರ ನವಂಬರ್ 2ರಂದು. ಆದರೆ ಜವಾಹರರಿಗೆ ಅವರ ಕಕ್ಕಿ ರಾಮಾಯಣ-ಮಹಾಭಾರತಗಳ ಕಥೆಗಳನ್ನೂ, 1857ರ ಸ್ವಾತಂತ್ರ  ಸಮರದಲ್ಲಿ ಹೋರಾಡಿದ ದೇಶಭಕ್ತ ವೀರರ ಕಥೆಗಳನ್ನೂ   ಹೇಳುತ್ತಿದ್ದರು. ಇದರಿಂದ ಜವಾಹರರಿಗೆ ನಮ್ಮ ದೇಶದ ಹಿರಿಮೆ ತಿಳಿಯುತ್ತಿತ್ತು. ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರು ನಡೆಸುವ ಅತ್ಯಾಚಾರಗಳ ಬಗ್ಗೆ ಹಿರಿಯರು ಮಾತನಾಡುವುದನ್ನು ಜವಾಹರರು ಬಹಳ ಕುತೂಹಲದಿಂದ ಕೇಳುತ್ತಿದ್ದರು. ಭಾರತೀಯರಿಗೆ ಎಲ್ಲಿಯೂ ಗೌರವದ ಸ್ಥಾನ-ಮಾನವಿರಲಿಲ್ಲ. ಉಪಾಹಾರ ಗೃಹಗಳಲ್ಲಿ, ರೈಲುಡಬ್ಬಿಗಳಲ್ಲಿ, ಸಾರ್ವಜನಿಕ ಉದ್ಯಾನಗಳಲ್ಲಿ- ಹೀಗೆ ಎಲ್ಲ ಕಡೆ ಬ್ರಿಟಿಷರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯಿರುತ್ತಿತ್ತು. ಬ್ರಿಟಿಷರು ಭಾರತೀಯರನ್ನು ಬಹಳ ಕೀಳುಭಾವನೆಯಿಂದ ಕಾಣುತ್ತಿದ್ದರು. ಇದೆಲ್ಲ ಕೇಳಿದಾಗ ಬಾಲಕ ಜವಾಹರರಿಗೆ ಬ್ರಿಟಿಷರ ಮೇಲೆ ಸಿಟ್ಟು ಬರುತ್ತಿತ್ತು.
ಇಂಗ್ಲೆಂಡಿನಲ್ಲಿ

ಜವಾಹರರಿಗೆ 15 ವರುಷ ದಾಟಿದಾಗ ಮೋತಿಲಾಲರು ಅವರನ್ನು ಇಂಗ್ಲೆಂಡಿನಲ್ಲಿ 'ಹ್ಯಾರೋ' ಎಂಬ ಸಾರ್ವಜನಿಕ ಶಾಲೆಗೆ ಸೇರಿಸಿದರು. ಅಲ್ಲಿ ಜವಾಹರರು ಬೀಜಗಣಿತ, ರೇಖಾಗಣಿತ, ಇತಿಹಾಸ, ಸಾಹಿತ್ಯ ಮುಂತಾದ ಎಲ್ಲ ವಿಷಯಗಳಲ್ಲಿ ಉತ್ತಮ ವಿದ್ಯಾರ್ಥಿಯೆಂದು ಹೆಸರು ಪಡೆದು ಬಹುಮಾನ ಗಳಿಸಿದರು. ಜವಾಹರರು ಇಂಗ್ಲೆಂಡಿಗೆ ಹೋದರೂ ಭಾರತದಲ್ಲಿ ನಡೆಯುತ್ತಿದ್ದ ಸಂಗತಿಗಳನ್ನು ತಿಳಿಯಲು ಉತ್ಸುಕರಾಗಿದ್ದರು ಮತ್ತು ಒಳ್ಳೊಳ್ಳೆಯ ಭಾರತೀಯ ಪತ್ರಿಕೆಗಳನ್ನು ತರಿಸಿಕೊಂಡು ಓದುತ್ತಿದ್ದರು.
1912 ರ ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಮರಳಿದ ಬಳಿಕ ಜವಾಹರರು ತಂದೆಯವರೊಡನೆ ವಕೀಲಿವೃತ್ತಿ ಪ್ರಾರಂಭಿಸಿದರು. ಅವರು ತೆಗೆದುಕೊಂಡ ಮೊದಲನೆಯ ಪ್ರಕರಣದಿಂದ ಅವರಿಗೆ ೫೦೦ ರೂಪಾಯಿ ಶುಲ್ಕ ಬಂದಿತು. 1916 ರ ಫೆಬ್ರವರಿ 8 ರ ವಸಂತಪಂಚಮಿಯ ದಿನ ದಿಲ್ಲಿಯಲ್ಲಿ ಜವಾಹರರ ಮದುವೆ ಬಹಳ ವೈಭವದಿಂದ ನೆರವೇರಿತು. ಅವರ ಪತ್ನಿ ಕಮಲಾ. ಆಕೆಯೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕೀರ್ತಿ ಗಳಿಸಿದರು. ಜವಾಹರರಿಗೆ ಒಬ್ಬಳೇ ಮಗಳು, ಇಂದಿರಾ ಪ್ರಿಯದರ್ಶಿನಿ.
ಜವಾಹರರ ಜೀವನ ನಾಡಿನ ಸ್ವಾತಂತ್ರ ದ ಹೋರಾಟದ ಒಂದು ಭಾಗವಾಗಿ ಹೋಯಿತು. ದೇಶದ ಸ್ವಾತಂತ್ರ ಕ್ಕಾಗಿ ಹೋರಾಟ ನಡೆದಾಗ ಅವರು ನಾಲ್ಕು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಅವರ ಇಡೀ ಜೀವನ ದೇಶಕ್ಕಾಗಿ ಸಮರ್ಪಿತವಾಗಿತ್ತು. ಅವರು ಸರ್ವಶಕ್ತಿಯಿಂದ ಸದಾಕಾಲವೂ ದೇಶಕ್ಕಾಗಿ ದುಡಿಯುತ್ತ ಮುಂದೆ ಮುಂದೆ ಸಾಗಿದರು. ಸೆರೆಮನೆಯಲ್ಲೇ ಇರಲಿ, ಹೊರಗೇ ಇರಲಿ, ಜವಾಹರರು ಯಾವಾಗಲೂ ದೇಶದ ಸ್ವಾತಂತ್ರ , ದೇಶದ ಉನ್ನತಿ, ದೇಶದ ಪ್ರಗತಿ ಇವುಗಳ ಚಿಂತೆಯನ್ನೇ ಮಾಡುತ್ತಿದ್ದರು.

ಭಾರತದ ಪ್ರಧಾನಿ


ಸ್ವತಂತ್ರ ಭಾರತಕ್ಕೆ  ಜವಾಹರಲಾಲ್ ನೆಹರೂ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸ್ವತಂತ್ರಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿ ದೇಶದ ಪ್ರಗತಿ ಸಾಧಿಸುವ ಪೂರ್ಣ ಹೊಣೆ ಹೊರಬೇಕಾಯಿತು. ಹದಿನೇಳು ವರ್ಷಕಾಲ ಅವರು ಸ್ವತಂತ್ರ ಭಾರತದ ಪ್ರಧಾನಿಯಾಗಿದ್ದರು. ಈ ಕಾಲದಲ್ಲಿ ಅವರು ನಮ್ಮ ದೇಶದ ಉನ್ನತಿಗಾಗಿಯಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಹೆಣಗಾಡಿದರು.
'ಭಾರತ ರತ್ನ'

1955ರಲ್ಲಿ ದೇಶದ ಜನತೆಯ ಪರವಾಗಿ ರಾಷ್ಟ್ರಪತಿಯವರು ಜವಾಹರರಿಗೆ 'ಭಾರತರತ್ನ' ಪದವಿ ನೀಡಿ ಗೌರವಿಸಿದರು.
ನಮ್ಮ ದೇಶದ ಉನ್ನತಿಗಾಗಿ ಚಾಚಾ ನೆಹರೂ ಕೊಟ್ಟ ಮಂತ್ರವೆಂದರೆ ''ಆರಾಮ್ ಹರಾಮ್ ಹೈ.'' ನಾವು ಎಂದಿಗೂ ಸೋಮಾರಿಗಳಾಗಬಾರದೆಂಬುದೇ ಆ ಮಂತ್ರದ ಅರ್ಥ.
ಸಾಹಿತಿ ನೆಹರು

ಜವಾಹರರು ಸಾಹಿತಿಗಳೂ ಆಗಿದ್ದರು. ಚಿಕ್ಕಂದಿನಿಂದಲೂ ಅವರಿಗೆ ಪುಸ್ತಕಗಳನ್ನು ಓದುವುದೆಂದರೆ ಬಹು ಆಸಕ್ತಿ. ದಿನವಿಡೀ ಬೇರೆ ಬೇರೆ ಕೆಲಸಗಳಿಂದ ದಣಿವಾದರೂ ಅವರು ರಾತ್ರಿ ಮಲಗುವ ಮುಂಚೆ ಸ್ವಲ್ಪ ಸಮಯ ಉತ್ತಮ ಪುಸ್ತಕ ಓದುತ್ತಿದ್ದರು. ಅವರಿಂದ ಇಂಗ್ಲಿಷ್ ಭಾಷೆಯಲ್ಲಿ ರಚಿತವಾದ ಮೂರು ಪುಸ್ತಕಗಳು ಜಗತ್ಪ್ರಸಿದ್ಧವಾಗಿವೆ. ಸಹಜವಾಗಿ ಅನುಕಂಪ ತೋರುವ ಹೃದಯ, ಯಾವ ಸಮಸ್ಯೆಯನ್ನೂ ವಿಶಾಲವಾದ ದೃಷ್ಟಿಯಿಂದ ಕಾಣುವ ವಿವೇಕ ಅವರ ಎಲ್ಲ ಪುಸ್ತಕಗಳಲ್ಲಿ ಕಾಣುತ್ತವೆ.
ದೀಪ ಆರಿತು

1964ರ ಮೇ 27
ರಂದು ನೆಹರು ನಿಧನರಾದರು. ಎಲ್ಲ ದೇಶಗಳ ಪ್ರಮುಖರು ಅಂತಿಮಯಾತ್ರೆಯಲ್ಲಿ ಭಾಗವಹಿಸಿ ತಮ್ಮ ಗೌರವ ಸಲ್ಲಿಸಿದರು.
ಅಪೂರ್ವ ದೇಶಭಕ್ತರು ಅಪೂರ್ವ ವ್ಯಕ್ತಿ

ಭಾರತ ಯುಗಧರ್ಮಕ್ಕೆ ಅನುಗುಣವಾಗಿ ಬದಲಾಗಬೇಕು, ತನ್ನ ಚಿಂತನೆ-ಸಂಸ್ಕೃತಿಗಳಲ್ಲಿ ಸತ್ವವಿರುವುದನ್ನು ಉಳಿಸಿಕೊಳ್ಳಬೇಕು, ಆದರೆ ಹೊಸ ಜ್ಞಾನ ಹೊಸ ಚಿಂತನೆಗಳಿಗೆ ಮನಸ್ಸನ್ನು ತೆರೆದಿರಬೇಕು ಎಂದು ನೆಹರೂ ಅವರು ಸಾರಿದರು. ಒಟ್ಟಿನಲ್ಲಿ ಅವರು ಅಪೂರ್ವ ದೇಶಭಕ್ತರು. ಅಪೂರ್ವ ಸ್ನೇಹಪರರಾದ, ಹೃದಯವಂತಿಕೆಯ ವ್ಯಕ್ತಿ.

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate