অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಟೀನ್ ಕಲರವ

ಟೀನ್ ಕಲರವ

ಜನವರಿ 26 ಭಾರತೀಯರ ಪಾಲಿಗೆ ಸಂಭ್ರಮದ ಐತಿಹಾಸಿಕ ದಿನ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತೇವೆ. ಒಂದು ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದ್ದಕ್ಕೆ, ಇನ್ನೊಂದು ನಾವು ಪ್ರಜಾಪ್ರಭುತ್ವ ದೇಶವನ್ನು ಕಟ್ಟಿಕೊಂಡಿದ್ದಕ್ಕೆ. ಈಗಿನ ನಾಯಕರು ತಮ್ಮ ಕಾರ್ಯಗಳನ್ನು ದೊಡ್ಡ ಸಾಧನೆಗಳಂತೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ಅಂಥ ಯಾವ ಉದ್ದೇಶಗಳೂ ಇಲ್ಲದೆ ಅನೇಕರು ನಾಯಕರು ದೇಶಕ್ಕಾಗಿ ದುಡಿದು, ಮಡಿದರು. ಗಣರಾಜ್ಯೋತ್ಸವ ಹತ್ತಿರ ಬರುತ್ತಿರುವ ಹೊತ್ತಲ್ಲಿ ನನ್ನ ತಲೆಯಲ್ಲಿ ಇವೇ ವಿಚಾರಗಳು ಹರಿದಾಡುತ್ತಿವೆ.

ನಾನು ಚಿಕ್ಕವನಾಗಿದ್ದಾಗಲೇ ನಮ್ಮ ಶಿಕ್ಷಕರು ಸ್ವಚ್ಚ ಭಾರತದ ಪರಿಕಲ್ಪನೆಯನ್ನು ನಮ್ಮಲ್ಲಿ ಬಿತ್ತಿದ್ದರು. ಅದು ವರ್ಷದ ಪ್ರಮುಖ ದಿನಗಳಲ್ಲಿ ನಡೆಯುತ್ತಿತ್ತು. ಅದರಲ್ಲಿ ಒಂದು ಗಣರಾಜ್ಯೋತ್ಸವ. ಹಿಂದಿನ ದಿನ ನಮ್ಮ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳ ಕೈಗಳಿಗೆ ಪೊರಕೆ ಕೊಟ್ಟು, ಕಸ ತುಂಬಲು ಪ್ಲಾಸ್ಟಿಕ್ ಚೀಲಗಳನ್ನು ಕೊಟ್ಟು ಶಾಲೆಯ ಆವರಣವನ್ನು ಸ್ವಚ್ಚ ಮಾಡಲು ಹೇಳುತ್ತಿದ್ದರು. ನಾವೆಲ್ಲರೂ ಕಾಡುವ ದೇವರ ಕಾಟ ಕಳೆದ್ಹಾಗೆ ಕಸಗೂಡಿಸುತ್ತಿದ್ದೇವು. ಸ್ವಚ್ಚತಾ ಕಾರ್ಯ ಮುಗಿದ ಮೇಲೆ ಎಲ್ಲ ಹುಡುಗರಿಗೂ ಪೆಪ್ಪರಮೆಂಟ್ ಅನ್ನು ನೀಡುತ್ತಿದ್ದರು. ಉತ್ತಮವಾಗಿ ಕಸಗೂಡಿಸಿದವರಿಗೆ ಬೋನಸಾಗಿ ಎಕ್ಸಟ್ರಾ ಪೆಪ್ಪರಮೆಂಟ್ ನೀಡಿ ಹುರಿದುಂಬಿಸುತ್ತಿದ್ದರು. ಇದಾದ ನಂತರ ಧ್ವಜದ ಕಂಬಕ್ಕೆ ಸುಣ್ಣ, ಬಣ್ಣ ಹಚ್ಚೋ ಕಾರ್ಯ ಮಾಡಿ, ಶಾಲೆಯ ತುಂಬೆಲ್ಲಾ ಬಣ್ಣ ಬಣ್ಣದ ಹಾಳೆಗಳಿಂದ ಇಡೀ ಅಂಗಳವನ್ನು ಚಂದಗೊಳಿಸುತ್ತಿದ್ದೆವು. ಆಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯ್ಕೆ ನಡೆಯುತ್ತಿತ್ತು.

ಇಷ್ಟೆಲ್ಲಾ ನಡೆಯುತ್ತಿದ್ದರು ನಮಗೆ ಜ.26 ಏನೆಂಬುದು ತಿಳಿದೇ ಇರಲಿಲ್ಲಾ. ಒಂದು ವೇಳೆ ಶಾಲೆಗೆ ಯಾರಾದ್ರೂ ಬಂದು ಜ.26ರ ವಿಶೇಷತೆ ಏನು? ಎಂದು ಕೇಳಿದ್ರೆ ನಮ್ಮಿಂದ ಆಶ್ಚರ್ಯಕರ ಉತ್ತರಗಳು ಬರುತ್ತಿದ್ದವು. ಒಬ್ಬೊಬ್ಬರ ಮುಖ ನೋಡಿಕೊಂಡು 'ಸರ್...! ಜ.26 ನಮ್ಮ ದೇಶಕ್ಕ ಸ್ವಾತಂತ್ರ್ಯ ಸಿಕೈತ್ರಿ' ಅಂತಲೂ, 'ಸರ್ ಅವತ್ತ ಗಾಂಧೀ ಜಯಂತಿ' ಎಂದು ಹೇಳುತ್ತಿದ್ದೆವು. ಪ್ರಶ್ನೆ ಕೇಳಿದ ಮಹಾನುಭಾವರು ನಮ್ಮ ಜ್ಞಾನ ಭಂಡಾರಕ್ಕೊಂದು ಶಹಭಾಷ್‌ಗಿರಿ ನೀಡಿ, ಗುರುಗಳಿಗೂ 'ಸರ್ ನಿಮ್ಮ ಹುಡುಗ್ರು ಅದ್ಭುತ' ಎಂದು ವ್ಯಂಗವಾಗಿ ಹೇಳುತ್ತಿದ್ದರು. ನಂತರ ಗುರುಗಳಿಂದ ದಂಡಂ ದಶಗುಣಂ!

ಇನ್ನೂ ಧ್ವಜಾರೋಹಣದ ದಿನ ಬೆಳಿಗ್ಗೆ ಬೇಗ ಬರ‌್ಬೇಕಾಗಿತ್ತು. ಒಂದು ವೇಳೆ ತಡವಾದ್ರೆ ಗೇಟ್ ಆಚೆಯೇ ನಿಲ್ಲಬೇಕಾಗಿತ್ತು. ಧ್ವಜಾರೋಹಣವಾದ ನಂತರ ನಮ್ಮ ಶಾಲೆಯ ಬ್ರಿಲಿಯಂಟ್ ವಿದ್ಯಾರ್ಥಿಗಳು ಕೈಲ್ಲೊಂದು ಹಾಳೆ ಹಿಡಿದುಕೊಂಡು ಭಾಷಣ ಮಾಡುತ್ತಿದ್ದರು. ಕಂಠ ಪಾಠ ಮಾಡಿದ ಭಾಷಣ ಮರೆತು ಹೋದರೆ ಕೈಯಲ್ಲಿದ್ದ ಹಾಳೆಯನ್ನು ನೋಡಿ ಮತ್ತೆ ಭಾಷಣ ಮುಂದುವರೆಸುತ್ತಿದ್ದರು. ರಾಷ್ಟ್ರ ಗೀತೆಗಳು, ನೃತ್ಯಗಳು ಸಾಮಾನ್ಯವಾಗಿದ್ದವು.

ಎಲ್ಲಾ ಮುಗಿದ ಮೇಲೆ ನಮ್ಮ ಪಯಣ ಪೋಲಿಸ್ ಸ್ಟೇಶನ್ ಕಡೆಗೆ ಸಾಗುತ್ತಿತ್ತು. ಸ್ಟೇಶನ್ ಬರೋವರೆಗೂ ಸಾವಧಾನವಾಗಿ ಬರುತ್ತಿದ್ದ ವಿದ್ಯಾರ್ಥಿಗಳು ಸ್ಟೇಶನ್ ಬಂದಾಕ್ಷಣ ತಾ ಮುಂದೆ ನಾ ಮುಂದೆ ಎಂದು ಪೈಪೋಟಿಗೆ ಇಳಿಯುತ್ತಿದ್ದರು. ಇದಕ್ಕೆ ಬಲವಾದ ಕಾರಣವು ಇತ್ತು. ಸ್ಟೇಶನ್‌ನಲ್ಲಿ ಪ್ರತಿ ವರ್ಷವು ಪೆಪ್ಪರ್‌ಮೆಂಟ್‌ಗಳನ್ನು ಹಂಚುತ್ತಿದ್ದರು. ಮೊದಲು ಇದ್ದವರಿಗೆ 10-15 ಪೆಪ್ಪರ್ ಮೆಂಟ್‌ಗಳನ್ನು ಹಂಚುತ್ತಿದ್ದರು. ಅನಂತರ ಇದ್ದವರಿಗೆ 5-6 ಸಿಗುತ್ತಿದ್ದವು. ಇದೇ ಕಾರಣಕ್ಕೆ ಜಿದ್ದಿಗೆ ಬಿದ್ದವರ ಹಾಗೆ ಹೆಜ್ಜೆ ಹಾಕುತ್ತಿದ್ದೆವು. ಇದಾದ ನಂತರ ನಮ್ಮ ಪಯಣ ಬಜಾರ ಕಡೆಗೆ ಹೊರಡುತ್ತಿತ್ತು. ಮಾರ್ಗ ಮಧ್ಯ ಪೆಪ್ಪರ್‌ಮೆಂಟ್‌ಗಳ ಸುಗ್ಗಿನೇ ಇರುತ್ತಿತ್ತು. ದಾರಿ ಉದ್ದಕ್ಕೂ ಅನೇಕ ಧ್ವಜಾರೋಹಣಗಳು ನಡೆಯುತ್ತಿದ್ದರಿಂದ ಎಲ್ಲರೂ ಬೇಗ ಬೇಗ ಹೋಗಿ ಚಾಕ್‌ಲೆಟ್, ಪೆಪ್ಪರ್‌ಮೆಂಟ್ ತೆಗೆದುಕೊಂಡು ಮತ್ತೆ ಹಿಂದಿನಿಂದ ಬರುತ್ತಿದ್ದರು.

ಗಣರಾಜ್ಯೋತ್ಸವ ಭವ್ಯ ಭಾರತದ ಪ್ರತಿಯೊಬ್ಬ ಪ್ರಜೆಗೂ ಹಕ್ಕುಗಳನ್ನು ನೀಡಿದ ದಿನ. ಪ್ರಜೆಯೇ ದೇಶದ ಪ್ರಭು ಎಂದು ಸಾರಿದ ದಿನ. ನಮಗೆ ಅದರ ಅರಿವೇ ಇಲ್ಲದೇ ಬೆಳೆದೆವು. ಸಂವಿಧಾನ, ಮತದಾನ, ಪ್ರಜಾಪ್ರಭುತ್ವ ಎಂಬುದು ಈ ದಿನದೊಂದಿಗೆ ಬೆಸೆದುಕೊಂಡಿದೆ ಎಂಬುದನ್ನು ನಾವು ಈಗ ನೆನಪಿಸಿಕೊಳ್ಳುತ್ತೇವೆ.

ಮೂಲ : ಮಂಜುನಾಥ ಗದಗಿನ, ಕವಿವಿ ಪತ್ರಿಕೋದ್ಯಮ ವಿಭಾಗ ಧಾರವಾಡ ,ಪ್ರಜಾವಾಣಿ

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate