অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಳೆ ನೀರು ಕೊಯ್ಲು

ಮಳೆ ನೀರು ಕೊಯ್ಲು

ಉದ್ದೇಶಗಳು

ಈ ಅಧ್ಯಾಯದಿಂದ ಮಳೆ ನೀರಿನ ಕೊಯ್ಲು ಮತ್ತು ಪುನರ್ ಬಳಕೆ ಬಗ್ಗೆ ತಿಳಿಸುವುದಾಗಿದೆ.

ಪರಿಚಯ

ಮಳೆ ನೀರು ಕೊಯ್ಲು ಎಂದರೆ ಭೂಮಿಗೆ ಬಿದ್ದಂತಹ ನೀರನ್ನು ವಿವಿಧ ಅವಶ್ಯಕತೆಗಳಿಗೆ ಸದಾ ಉಪಯೋಗಿಸಲು ಅನುಕೂಲವಾಗುವಂತೆ ಸಾಧ್ಯವಾದಷ್ಟು ಪ್ರಮಾಣದಲ್ಲಿ ಕೃಷಿ ಮತ್ತು ಕೃಷಿಯೇತರ ಪ್ರದೇಶದಲ್ಲಿ ಮಳೆ ನೀರು ಸಂಗ್ರಹಣಾ ರಚನೆಗಳಲ್ಲಿ ಶೇಖರಿಸುವುದಲ್ಲದೆ, ಮೇಲ್ಛಾವಣಿಯ ಮಳೆ ನೀರನ್ನು ಶೇಖರಿಸುವುದು. ರಾಜ್ಯದ ಭೌಗೋಳಿಕ ಪ್ರದೇಶದಲ್ಲಿ ಶೇ. 60 ಭಾಗ ಮಳೆಯಾಶ್ರಿತ ಪ್ರದೇಶವಾಗಿದ್ದು, ವಾರ್ಷಿಕ ಮಳೆಯ ಶೇ. 57 ರಷ್ಟು ಮುಂಗಾರು ಮಳೆಯಲ್ಲಿ ಹೆಚ್ಚಾದ ಮಳೆ ನೀರನ್ನು ವಿವಿಧ ರೀತಿಯ ಸಂಗ್ರಹಣಾ ರಚನೆಗಳಲ್ಲಿ ಸಂಗ್ರಹಿಸಿ ವಿವಿಧ ಉದ್ದೇಶಗಳಿಗೆ ಪುನರ್‍ಬಳಕೆ ಮಾಡಬಹುದು.

ಉದ್ದೇಶಗಳು

  • ಹರಿದು ಹೋಗುವ ನೀರನ್ನು ತಡೆಗಟ್ಟಿ ಭೂಮಿಯಲ್ಲಿ ಇಂಗುವಂತೆ ಮಾಡುವುದು.
  • ಅಂತರ್ಜಲವನ್ನು ಹೆಚ್ಚಿಸುವುದು.
  • ಹಳ್ಳಗಳಲ್ಲಿ ಹೆಚ್ಚು ದಿನಗಳವರೆಗೆ ನೀರು ಲಭ್ಯವಾಗುವಂತೆ ಮಾಡುವುದು.
  • ಬೆಳೆಗಳಿಗೆ ಸಸ್ಯ ಸಂರಕ್ಷಣೆ, ರಾಸಾಯನಿಕಗಳನ್ನು ಸಿಂಪಡಿಸಲು ನೀರು ದೊರೆಯುವಂತೆ ಮಾಡುವುದು.
  • ದನ ಕರುಗಳಿಗೆ ಕುಡಿಯಲು ಮತ್ತು ಗೃಹ ಬಳಕೆಗೆ ನೀರು ಒದಗುವಂತೆ ಮಾಡುವುದು.
  • ರಕ್ಷಣಾತ್ಮಕ ನೀರಾವರಿಗೆ ನೀರನ್ನು ಬಳಸಿ ಕೃಷಿ ಉತ್ಪಾದನೆ ಹೆಚ್ಚಿಸಲು ನೆರವಾಗುವುದು.
  • ಹಳ್ಳಕೊಳ್ಳ ಮುಂದಕ್ಕೆ ಸರಿಯದಂತೆ ಹೆಚ್ಚು ಆಳ, ಅಗಲವಾಗುವುದನ್ನು ತಡೆಗಟ್ಟುವುದು.
  • ದೊಡ್ಡ ಜಲಾಶಯಗಳಿಗೆ ಹರಿದು ಹೋಗುವ ಹೂಳಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

ವಿಧಾನಗಳು

ಕೃಷಿ ಮತ್ತು ಕೃಷಿಯೇತರ ಪ್ರದೇಶಗಳಲ್ಲಿ ಮಳೆ ನೀರಿನ ಕೊಯ್ಲು

ಮೇಲ್ಛಾವಣಿ ಮಳೆ ನೀರು ಕೊಯ್ಲು

ಕೃಷಿ ಮತ್ತು ಕೃಷಿಯೇತರ ಪ್ರದೇಶಗಳಲ್ಲಿ ಮಳೆ ನೀರಿನ ಕೊಯ್ಲು

  1. ಬೇಸಾಯ ಕ್ರಮಗಳು : ಮಳೆಯ ನೀರನ್ನು ಬಿದ್ದಲ್ಲಿಯೇ ಸಂರಕ್ಷಿಸುವುದಕ್ಕೆ ಹಲವಾರು ಬೇಸಾಯ ಕ್ರಮಗಳನ್ನು ಸಂದರ್ಭಕ್ಕನುಸಾರ ಅಳವಡಿಸುವುದು ಉತ್ತಮ.
  • ಭೂಮಿಯನ್ನು ಸಿದ್ಧಪಡಿಸುವುದು. : ಮಿಶ್ರ ಬೆಳೆ ಬೆಳೆಯುವುದರಿಂದ ಉತ್ತಮ ಬೆಳೆ ಹೊದಿಕೆ ದೊರೆಯುತ್ತದೆ. ಉದಾಹರಣೆಗೆ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು ಅಥವಾ ಮುಂಗಾರಿಗೆ ಮುನ್ನ ಬೀಳುವ ಪ್ರಥಮ ಮಳೆಯಾದ ನೀರಿನ ವೇಗ ತಗ್ಗ್ಗುವುದರ ಜೊತೆಗೆ ಹೆಚ್ಚಿನ ನೀರು ಮಣ್ಣಿನಲ್ಲಿ ಇಂಗಲು ಕಾಲಾವಕಾಶ ಸಿಗುತ್ತದೆ.
  • ಬೆಳೆ ಪದ್ಧತಿ : ಮಿಶ್ರ ಬೆಳೆ ಬೆಳೆಯುವುದರಿಂದ ಉತ್ತಮ ಬೆಳೆ ಹೊದಿಕೆ ದೊರೆಯುತ್ತದೆ. ಉದಾಹರಣೆಗೆ ಇಳಿಜಾರಿಗೆ ಅಡ್ಡವಾಗಿ 8 ಸಾಲು ರಾಗಿ, 2 ಸಾಲು ತೊಗರಿ ಬಿತ್ತನೆ ಮಾಡಬೇಕು. ಎರಡು ತೊಗರಿ ಸಾಲಿನ ಮಧ್ಯದಲ್ಲಿ ದೋಣಿ ಕಾಲುವೆ ಮಾಡುವುದರಿಂದ ನೀರು ಮತ್ತು ಪೋಷಕಾಂಶಗಳನ್ನು ಸಂರಕ್ಷಿಸಬಹುದು.
  • ಸಾವಯವ ಗೊಬ್ಬರದ ಬಳಕೆ : ಉಷ್ಣ ಮತ್ತು ಅರೆ ಉಷ್ಣವಲಯದಲ್ಲಿ ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆ ಇರುತ್ತದೆ. ಸಾವಯವ ಗೊಬ್ಬರವನ್ನು ಜಮೀನಿನೊಲ್ಲಿ ಸೇರ್ಪಡೆ ಮಾಡುವುದರಿಂದ ಮಣ್ಣಿನ ಭೌತಿಕ ರಚನೆ ಉತ್ತಮಗೊಂಡು ಹೆಚ್ಚಿನ ನೀರು ಮಣ್ಣಿನಲ್ಲಿ ಹಿಡಿದಿಡಲ್ಪಡುತ್ತದೆ.

ತಾಂತ್ರಿಕ ವಿಧಾನದಿಂದ ಮಳೆಯ ನೀರು ಸಂರಕ್ಷಣೆ

  • ಸಾಧಾರಣ ಮಟ್ಟಮಾಡುವುದು : ಎರಡು ಬದಗಳ ಮಧ್ಯದ ಪ್ರದೇಶದಲ್ಲಿರುವ ಸಣ್ಣಪುಟ್ಟ ತಗ್ಗು ಉಬ್ಬುಗಳನ್ನು ಭೂಮಿ ಸಿದ್ಧಪಡಿಸುವಾಗಲೇ ಸಾಧಾರಣವಾಗಿ ಮಟ್ಟ ಮಾಡುವುದರಿಂದ ತೇವಾಂಶ ಸಮವಾಗಿ ಹರಡಿ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಇದರಿಂದ ಬೆಳೆಯು ಒಂದೇ ಸಮನೆ ಬೆಳೆದು ಉತ್ತಮ ಇಳುವರಿಯೂ ಬರುತ್ತದೆ.
  • ಚೌಕುಮಡಿ : 15 ರಿಂದ 20 ಸೆ.ಮೀ. ನಷ್ಟು ಎತ್ತರದ ಚಿಕ್ಕ ಬದುಗಳನ್ನು ಉದ್ದ-ಅಗಲ 20 ಮೀ. ಇರುವಂತೆ ಇಳುಕಲು ಶೇ. 1 ಕ್ಕಂತ ಹೆಚ್ಚು ಇದ್ದಾಗ ನಿರ್ಮಿಸುವುದು. ಇವುಗಳನ್ನು ಮೊದಲ ಉಳುಮೆಯ ನಂತರ, ಬದು ನಿರ್ಮಿಸುವ ಸಾಧನಗಳಿಂದ ನಿರ್ಮಿಸಬೇಕು.
  • ತಟ್ಟೆಯಾಕಾರದ ಗುಣಿಗಳು : ಎಡೆಕುಂಟೆ ತಾಳುಗಳಿಗೆ ಹಗ್ಗ ಕಟ್ಟಿಕೊಂಡು ಅಥವಾ ಇತರ ಉಪಕರಣಗಳಿಂದ ಚಿಕ್ಕ ಚಿಕ್ಕ ಗುಣಿ ನಿರ್ಮಿಸುವುದು. ಇದರಿಂದ ಹೆಚ್ಚಿನ ನೀರು ಬಿದ್ದಲ್ಲಿಯೇ ಸಂರಕ್ಷಣೆಯಾಗುತ್ತದೆ.
  • ಏರುಮಡಿ : ಒಂದು ಕೊಡಿಗೆ ಅಗಲದಷ್ಟು ಮಡಿಗಳನ್ನು ಮಾಡುವುದು., ಜೊತೆಗೆ ಎರಡು ಮಡಿಗಳ ಮಧ್ಯೆ ಕಾಲುವೆಗಿಂತ ಶೇ. 0.2 ರಿಂಧ 0.6 ರಷ್ಟು ಇಳುಕಲು ಕೊಟ್ಟು ಇಳುಕಲಿಗೆ ಅಡ್ಡವಾಗಿ ರಚಿಸುವುದು.
  • ಮಾಗಿ ಉಳುಮೆ : ಮಳೆಗಾಲದ ಪ್ರಾರಂಭದ ದಿನಗಳಲ್ಲಿ (ಫೆಬ್ರವರಿ ಮತ್ತು ಮಾರ್ಚ್) ಭೂಮಿಯನ್ನು ಇಳಿಜಾರಿಗೆ ಅಡ್ಡವಾಗಿ ಉಳುಮೆ ಮಡಿ ಸ್ಥಳದಲ್ಲೇ ಮಳೆ ನೀರನ್ನು ಶೇಖರಿಸಿ ಭುಮಿಗೆ ಇಂಗಿಸಬೇಕು. ಈ ರೀತಿ ಮಾಡಿದಲ್ಲಿ ಸರಾಸರಿ 20-25 ರಷ್ಟು ಬೆಳೆ ಉತ್ಪಾದನೆಯನ್ನು ಹೆಚ್ಚಿಸಬಹುದು. ಈ ಪದ್ಧತಿಯು ಮಣ್ಣಿನ ಬೌತಿಕ ಹಾಗೂ ರಾಸಾಯನಿಕ ಗುಣಗಳ ಮೇಲೆ ಅವಲಂಬಿತವಾಗಿದೆ.
  • ಬದುಗಳು :  ತಾಕಿನಲ್ಲಿ ಇಳಿಜಾರಿಗೆ ಅಡ್ಡಲಾಗಿ ಅಂತರ ಬದುಗಳನ್ನು ಪ್ರತಿ 30 ರಿಂದ 50 ಮೀಟರ್ ಅಂತರದಲ್ಲಿ 0.36 ಚ.ಮೀಟರ್ ಗಾತ್ರದ ಬದುಗಳನ್ನು ನಿರ್ಮಾಣ ಮಾಡುವುದರಿಂಧ ಹೆಚ್ಚು ಮಳೆ ನೀರು ಶೇಖರಣೆಯಾಗಿ ಬೆಳೆ ಉತ್ಪಾದನೆಯನ್ನು ಶೇ. 10 ರಿಂದ 15 ರಷ್ಟು ಹೆಚ್ಚಿಸಬಹುದು ಹಾಗೂ ಮಣ್ಣಿನ ಸವಕಳಿಯನ್ನು ತಡೆಯಬಹುದು.
  • ದೋಣಿ ಸಾಲು : ಅಂತರ ಬೆಳೆ ಪದ್ಧತಿಯಲ್ಲಿ 8:2 ರ (ರಾಗಿ: ತೊಗರಿ ಅಥವಾ ನೆಲಗಡಲೆ : ತೊಗರಿ ) ಅನುಪಾತದಲ್ಲಿನ ತೊಗರಿ ಸಾಲುಗಳ ಮಧ್ಯದಲ್ಲಿ 1 ಅಡಿ ಅಗಲ, 4 ಅಂಗುಲ ಆಳ ಮತ್ತು 3.5 ಅಡಿ ಉದ್ದದ ದೋಣಿಯಲ್ಲಿ ಸುಮಾರು 0.2 ಘನ ಮೀಟರ್ ನೀರನ್ನು ಶೇಖರಿಸಬಹುದಾಗಿದೆ.

ಹರಿದು ಬರುವ ಮಳೆ ನೀರನ್ನು ಸಂಗ್ರಹಿಸುವ ವಿಧಾನಗಳು

ನಾಲಾ ಬದು/ಜಿನುಗು ಕೆರೆ/ತಡೆ ಅಣಿ : ಅಂತರ್ಜಲವನ್ನು ವೃದ್ಧಿಮಾಡುವ ದಿಶೆಯಲ್ಲಿ ನೀರು ಬಸಿಯುವ ಹಳ್ಳದಲ್ಲಿ ಮಣ್ಣಿನ ಒಡ್ಡುಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಬೇಕು. ನಾಲಾ ಬದುವಿನ ಉದ್ದೇಶಗಳೆಂದರೆ :

ಸಂಗ್ರಹಿಸಿದ ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದು.

ಅಂತರ್ಜಲ ವೃದ್ಧಿಸುವುದು.

  1. ಇಂಗು ಕೊಳಗಳು  : ಇವುಗಳು ಹೆಚ್ಚು ಆಳವಿಲ್ಲಿದ ತಗ್ಗುಗಳಾಗಿದ್ದು, ಪ್ರಾಕೃತಿಕವಾಗಿ ಹರಿದು ಹೋಗುವಂತಹ ತೊರೆಗಳ ಹರಿವಿನ ಪ್ರದೇಶದಲ್ಲಿ ನಿರ್ಮಿಸಬಹುದಾಗಿದೆ. ಬೌಗೋಳಿಕವಾಗಿ ಸಮತಟ್ಟು ಅಥವಾ ಕಿರು ಇಳಿಜಾರು ಪ್ರದೇಶದಲ್ಲಿ ಇಂಗು ಕೊಳಗಳನ್ನು ನಿರ್ಮಿಸಬಹುದಾಗಿದೆ. ಇಳಿಜಾರು ಪ್ರದೇಶದಲ್ಲಿ ಇಂಗು ಕೊಳ ನಿರ್ಮಿಸಿದ್ದಲ್ಲಿ ಇಂಗಿದ ನೀರು ಇಳಿಜಾರಿನಲ್ಲಿ ಹರಿದು ಹೋಗಿ ಹೆಚ್ಚು ನೀರು ಇಂಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
  2. ತೊರೆ ಕಾಲುವೆ ಮೂಲಕ ಇಂಗು ಗುಂಡಿ ವಿಧಾನ : ನೀರು ಇಂಗುವಂತೆ ಮಾಡಲು ನೀರು ಶೇಖರಣಾ ಸ್ಥಳದ ವಿಸ್ರ್ತೀಣ ಹಾಗೂ ನೀರು ನಿಲ್ಲುವ ಕಾಲಮಿತಿ ಹೆಚ್ಚಾಗಿರಬೇಕಾಗುತ್ತದೆ. ಈ ವಿಧಾನವನ್ನು ಅಳವಡಿಸಿದ ಪ್ರದೇಶದ ಮೇಲು ಹರಿವಿನಲ್ಲಿ ನೀರು ಶೇಖರಣಾ ವ್ಯವಸ್ಥೆಯಿದ್ದಲ್ಲಿ ತೊರೆಗಳ ಮೂಲಕ ನೀರು ನಿರಂತರವಾಗಿ ಹರಿದು ಬರುತ್ತದ್ದು ಇಂಗುವಿಕೆ ಸಹಕಾರಿಯಾಗುತ್ತದೆ.
  3. ಒಣಕಲ್ಲಿನ ತಡೆ ಅಣೆ : ಖುಷ್ಕಿ ಭೂಮಿಯಲ್ಲಿನ ಕೊರಕಲು ಪ್ರದೇಶದಲ್ಲಿ ನೀರನ್ನು ಹೆಚ್ಚಾಗಿ ನಿಲ್ಲಿಲಸುವ ಅವಶ್ಯಕತೆ ಇಲ್ಲದಿರುವಾಗ ಹಾಗೂ ಮಣ್ಣನ್ನು ಮಾತ್ರ ಕೊಚ್ಚಿ ಹೋಗುವುದನ್ನು ತಡೆ ಹಿಡಿಯಲು (ನೀರು ಬಸಿದು ಹೋಗಲು) ಸುಧಾರಣೆಗಾಗಿ ಕೊರಕಲಿನ ಪ್ರಾರಂಭದಿಂದ ಮಧ್ಯಭಾಗದವರೆಗೂ ಒಣಕಲ್ಲಿನ ತಡೆಗಳನ್ನು ಕಟ್ಟಲಾಗುತ್ತದೆ, ಕೊರಕಲಿನ ಕೊನೆಯಲ್ಲ ಜಲವಾಹಿನಿಗಳ ನಿರ್ಮಾಣದಿಂದ ರೇವೆ ಮಣ್ಣು (ಸಿಲ್ಟ್) ಸಂಗ್ರಹವಾಗಿ, ಕೊರಕಲುಗಳಲ್ಲಿ ತೇವಾಂಶ ಹೆಚ್ಚು ಸಸ್ಯಗಳು ಬೆಳೆಯಲು ಅನುಕೂಲವಾಗಿ ಸವಕಳಿಯಾಗುವುದು ತಪ್ಪುತ್ತದೆ.
  4. ಉಸುಕಿನ ಚೀಲದ ಅಣೆ : ಇವುಗಳು ಸುಭದ್ರ ತಡೆಗಳಂತಿರುತ್ತದೆ. ಇವುಗಳಲ್ಲಿ ಖಾಲಿ ಇರುವ ಸಿಮೆಂಟ್/ಗೊಬ್ಬರದ ಚೀಲಗಳಲ್ಲಿ ಮರಳನ್ನು ತುಂಬಿ ಇಳಕಲಿಗೆ ಅಡ್ಡಲಾಗಿ ಇಡಲಾಗುತ್ತದೆ. ಇವುಗಳ ಉದ್ದೇಶ ಭೂಸವಕಳಿಯ ವೇಗವನ್ನು ತಡೆಯುವುದು, ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದು ಹಾಗೂ ಮಹಾಪೂರದಂತ ವಿಕೋಪವನ್ನು ತಡೆಯುವುದು.
  5. ಗೇಬಿಯನ್ ರಚನೆ : ಈ ರಚನೆಯನ್ನು ಸಣ್ಣ ತೊರೆಗಳಲ್ಲಿ ಹರಿದು ಹೋಗುವ ನೀರನ್ನು ತಡೆಹಿಡಿಯಲು ಕಟ್ಟಲಾಗುತ್ತದೆ. ಆದರೆ ಇದಕ್ಕೆ ತೊರೆಯ ತಳಭಾಗದಿಂದ ಅಡಿಪಾಯವಿರುವುದಿಲ್ಲ. ಕಬ್ಬಿಣದ ಜಾಲರಿಯನ್ನು ಅಳವಡಿಸಿ ಸ್ಥಳೀಯವಾಗಿ ದೊರಕುವ ಕಾಡುಗಲ್ಲುಗಳನ್ನು ಜೋಡಿಸಿ ನೀರು ಹರಿದು ಹೋಗುವುದನ್ನು ತಪ್ಪಿಸಬಹುದಾಗಿದೆ.

ಮಳೆ ನೀರು ಸಂಗ್ರಹಣೆ

ಕೃಷಿ ಹೊಂಡ :

ಕೆಂಪು ಮಣ್ಣಿನ ಪ್ರದೇಶದಲ್ಲಿ ಪ್ರತಿ ಎರಡೂವರೆ ಎಕರೆ ಪ್ರದೇಶಕ್ಕೆ ಸುಮಾರು 250 ಘನ ಮೀಟರ್ ಸಾಮಥ್ರ್ಯವುಳ್ಳ ಕೃಷಿ ಹೊಂಡವನ್ನು ತಾಕಿನ ಕೆಳಭಾಗದಲ್ಲಿ ನಿರ್ಮಿಸಬೇಕು ಈ ಸಾಮಥ್ರ್ಯದ ಕೃಷಿ ಹೊಂಡಕ್ಕೆ ಮೇಲ್ಭಾಗದಲ್ಲಿ 12 ಮೀಟರ್ ಅಗಲವಿರುವಂತೆ ಪಕ್ಕ ಗೋಡೆಗಳಿಗೆ 1:1 ಪ್ರಮಾಣದಲ್ಲಿ ಇಳಿಜಾರು ಮಾಡಬೇಕು. ಕೃಷಿ ಹೊಂಡದ ಆಳ 3 ಮೀಟರ್ ಇರಬೇಕಕು. ಕೃಷಿ ಹೊಂಡಕ್ಕೆ ಜಮೀನಿನಿಂದ ಸರಾಗವಾಗಿ ನೀರು ಕಾಲುವರಗಳನ್ನು ನಿರ್ಮಿಸಬೇಕು ಕೃಷಿ ಹೊಂಡಕ್ಕೆ ನೀರು ಹರಿದು ಬರಲು ಒಳ ಹರಿವು ಮತ್ತು ಕೃಷಿ ಹೊಂಡ ತುಂಬಿ ಹೊರ ಹರಿಯುವ ನೀರಿಗೆ ರಚನೆಗಳನ್ನು ಸುಭದ್ರವಾಗಿ ನಿರ್ಮೀಸಬೇಕು. ಈ ರೀತಿ ಸಂಗ್ರಹಿಸಿದ ನೀರನ್ನು ಉಪಯೋಗಿಸಿ ಅಲ್ಫಾವಧಿ ತರಕಾರಿ ಬೆಳೆಗಳು ಹಾಗೂ ನಾಟಿ ಮಾಡಿದ ತೋಟಗಾರಿಕೆಯ ಸಸಿಗಳನ್ನು ಬೆಳೆಸಲು ಬಳಸಬಹುದು. ಕೃಷಿ ಹೊಂಡದಲ್ಲಿ ಶೇಖರಿಸಿದ ನೀರು ಸುಮಾರು 180 ದಿನಗಳು ಇರುವ ಸಂದರ್ಭದಲ್ಲಿ ಮೀನುಸಾಕಣೆಯನ್ನು ಸಹ ಮಾಡಬಹುದು.

ಕೊಳವೆ ಭಾವಿಗಳ ಮರುಪೂರಣ :

ಒಂದು ಕೊಳವೆ ಬಾವಿಗೆ ಜಲ ಮರುಪೂರಣ ಮಾಡುವ ಸಂದರ್ಭದಲ್ಲಿ, ಆ ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಬಂದಿರುವ ಕಲ್ಲಿನ ಪದರಗಳ ವಿವರ, ಬೋರ್‍ವೆಲ್ ಕೊರೆಯುವ ಆಳ ಕೇಸಿಂಗ್ ಪೈಪಿನ ವಿವರ ಇತ್ಯಾದಿ ಗಮನದಲ್ಲಿಟ್ಟುಕೊಂಡು ಇಂಗು ಗುಂಡಿ ನಿರ್ಮಿಸಬೇಕಾಗುತ್ತದೆ.

ಗುಂಡಿಗೆ ಬೇಕಾದ ಸಾಮಗ್ರಿಗಳು :

ಜಲ ಮರುಪೂರಣಕ್ಕೆ ಬೋಲ್ಡರ್ಸ್ ಕಲ್ಲುಗಳು, ದಪ್ಪ ಮರಳು, ಸಣ್ಣ ಮರಳು, ಇದ್ದಿಲು, ನೈಲಾನ್ ಮೇಷ್ ಉಪಯೋಗಿಸುವರು. ಜಲ ಮರುಪೂರಣ ಮಾಡುವ ಇಂಗು ಗುಂಡಿಗೆ ಆಯಾ ಪ್ರದೇಶದಲ್ಲಿಯೇ ಸಿಗುವಂತಹ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು.

ಮರುಪೂರಣ ಸಾಮಗ್ರಿಗಳನ್ನು ತುಂಬುವ ಬಗ್ಗೆ

ಇಂಗು ಗುಂಡಿಯು 3 ಮೀ. ಆಳ ಇರಬೇಕು. ದಪ್ಪ ಕಲ್ಲುಗಳನ್ನು 1.5 ಮೀ. ಎತ್ತರ ತುಂಬಬೇಕು. ಇದರ ಮೇಲ್ಭಾಗದಲ್ಲಿ 15 ಸೆ.ಮೀ. ದಪ್ಪದ ಕಲ್ಲುಗಳನ್ನು 30 ಸೆ.ಮೀ. ಎತ್ತರ ತುಂಬಬೇಕು. ನಂತರ 40 ಮಿ.ಮೀ ಜೆಲ್ಲಿ 15 ಸೆಂ.ಮೀ. ಎತ್ತರ, ಇದರ ಮೇಲೆ ಬೇಬಿ ಜೆಲ್ಲಿ 20 ಮಿ.ಮೀ. ಎತ್ತರ ತುಂಬಬೇಕು. ನಂತರ 15 ಸೆಂ.ಮೀ. ಎತ್ತರ ಇದ್ದಿಲು ತುಂಬಬೇಕು. ಅದರ ಮೇಲೆ ನೈಲಾನ್ ಮೆಷ್ ಹಾಸಬೇಕು. ಇದರ ಮೇಲೆ ದಪ್ಪ ಮರಳು 30 ಸೆಂ.ಮೀ. ಎತ್ತರ ಹರಡಬೇಕು. 3 ಮೀ. ಆಳದ ಇಂಗು ಗುಂಡಿಗೆ 30 ಸೆಂ.ಮೀ. ಎತ್ತರದಷ್ಟು ಖಾಲಿ ಜಾಗ ಇರಬೇಕಾಗುತ್ತದೆ. ಪೂರ್ಣ ಜಲ ಮರುಪೂರಣ ಸಾಮಗ್ರಿಗಳನ್ನು ಇಂಗು ಗುಂಡಿಗೆ ತುಂಬಿದ ಮೇಲೆ ಇಂಗು ಗುಂಡಿ ಸುತ್ತಲೂ ಕಲ್ಲುಗಳಿಂದ ಗೋಡೆ ನಿರ್ಮಿಸಿ ಸಿಮೆಂಟ್ ಕಾಂಕ್ರೀಟ್‍ನಿಂದ ಭದ್ರಗೊಳಿಸಿದರೆ ಇಂಗು ಗುಂಡಿಯಲ್ಲಿ ಮಳೆ ನೀರು ಹರಿದುಬರುವ ಸಂದರ್ಭದಲ್ಲಿ ನೀರು ನಿಲ್ಲುವುದಕ್ಕೆ ಅನುಕೂಲವಾಗುತ್ತದೆ.

ಸೋಸು ಗುಂಡಿ

ಮಳೆ ನೀರು ಹರಿದು ಬರುವಾಗ ಕಸ ಕಡ್ಡಿ ಮಣ್ಣು ಮಿಶ್ರಿತ ನೀರು ಹರಿದು ಬರುವುದರಿಂದ ಬರುವ ಮಳೆ ನೀರನ್ನು ಶೋಧಿಸಲು, ಸೋಸು ಗೂಂಡಿಗಳನ್ನು ನಿರ್ಮಿಸುವುದರಿಂದ ಮಾರ್ಗ ಮಧ್ಯದಲ್ಲಿ ನೀರಿನ ಹರಿವಿಗೆ ತಡೆಯೊಡ್ಡುವ ಕಸ ಕಡ್ಡಿ ಮಣ್ಣು ಮುಂತಾದ ತ್ಯಾಜ್ಯವಸ್ತುಗಳನ್ನು ಜಲ ಮರುಪೂರಣ ಇಂಗು ಗುಂಡಿಗೆ ಬರದ ಹಾಗೆ ತಡೆಹಿಡಿಯಬಹುದು.

ಕೇಸಿಂಗ್ ಲೈಪ್ ಸುರಕ್ಷತೆ

ಇಂಗು ಗುಂಡಿ ನಿರ್ಮಿಸಿದ ನಂತರ ಕೇಸಿಂಗ್ ಪೈಪ್‍ನ್ನು ಒಮ್ಮೆ ಪರೀಕ್ಷಿಸಬೇಕು. ಕೆಲವು ಕೊಳವೆ ಬಾವಿಗ ಕಬ್ಬಿಣದ ಕೇಸಿಂಗ್ ಪೈಪ್‍ಗಳು ತುಕ್ಕು ಹಿಡಿದಿರುತ್ತದೆ. ಕೆಲವೊಮ್ಮೆ ಬೆಂಡಾಗಿರುತ್ತವೆ. ಅಂತಹ ಸಂಧರ್ಭದಲ್ಲಿ ಕೆಲವು ಅಡಿಗಳಷ್ಟು ಪೈಪ್‍ನ್ನು ತೆಗೆದು ಹೊದ ಕೇಸಿಂಗ್ ಪೈಪ್‍ನ್ನು ಸೇರಿಸಿ ಜಲ ಮರುಪೂರಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಳಸಿಕೊಳ್ಳಬಹುದು. ಇಂಗು ಗುಂಡಿಯಲ್ಲಿ ಕೇಸಿಂಗ್ ಪೈಪ್ ಸುತ್ತಲೂ ಕಬ್ಬಿಣದ ಕ್ಲಾಂಪ್ ಹಾಕಿ ಸಿಮೆಂಟ್ ಕಾಂಕ್ರಿಟ್ ನಿರ್ಮಿಸುವುದೆರಿಂದ ಅದು ಜಾರದಂತೆ ಭದ್ರವಾಗಿ ಹಿಡಿದುಕೊಳ್ಳುತ್ತದೆ.

ರಂಧ್ರಗಳನ್ನು ನಿರ್ಮಿಸುವುದು

ರಂಧ್ರಗಳನ್ನು ಕೊರೆಯುವ ಡ್ರಿಲ್ಲಿಂಗ್ ಮೆಷೀನ್‍ನಿಂದ ಸುಮಾರು 2 ಮಿ.ಮೀ. 4 ಮಿ.ಮೀ. ಮತ್ತು 6 ಮಿ.ಮೀ. ರಂಧ್ರಗಳನ್ನು 7.5 ಸೆಂ.ಮೀ. ಅಂತರದಲ್ಲಿ ಸಉಮಾರು 200 ರಿಂದ 400 ರಂಧ್ರಗಳನ್ನು ನಿರ್ಮಿಸಬೇಕು. ಪ್ಲಾಸ್ಟಿಕ್ ಮತ್ತು ಕಟ್ಟಿಣದ ಪೈಪ್‍ಗಳಿಗೂ ಈ ವಿಧವಾದ ರಂಧ್ರಗಳನ್ನು ನಿರ್ಮಿಸಬೇಕು

ಕೇಸಿಂಗ್ ಪೈಪ್‍ಗೆ ಶೋಧಕಗಳನ್ನು ಅಳವಡಿಸುವ ಬಗೆ

ರಂಧ್ರಗಳನ್ನು ನಿರ್ಮಿಸಿದ ನಂತರ ಕೇಸಿಂಗ್ ಪೈಪ್ ಒಳಗೆ ನೀರನ್ನು ನೇರವಾಗಿ ಬಿಡುವಂತಿಲ್ಲ. ರಂಧ್ರಗಳನ್ನು ನಿರ್ಮಿಸುವ ಕೇಸಿಂಗ್ ಪೈಪ್‍ಗೆ ನೈಲಾನ್ ಮೆಷ್‍ನಂತಹ ಅಕ್ವಾ ಮೆಷ್ ನಂತರ ಮರಳು ಕೇಸಿಂಗ್ ಪೈಪ್ ಸುತ್ತಲೂ ಬರುವಂತೆ ನೈಲಾನ್ ಮೆಷ್‍ನಿಂದ ಸುತ್ತುವರಿಸಬೇಕು.

ಕಡಿಮೆ ಇಳುವರಿ ಅಥವಾ ಪೂರ್ಣ ಬತ್ತಿಹೋಗಿರುವ ಬಾವಿಗಳಿಗೆ ಶೀಘ್ರ ಮರುಪೂರಣ

ಈ ವಿಧಾನದಲ್ಲಿ ಮಳೆ ನೀರಿನ ಹರಿವನ್ನು ಬತ್ತಿ ಹೋದ ಬೋರ್‍ವೆಲ್ ಕಡೆಗೆ ತಿರುಗಿಸಿ ಆ ಒಳ ಹರಿವಿಗೆ ಅಡ್ಡವಾಗಿ ಒಂದು ಸೋಸು ಗುಂಡಿ ಮತ್ತು ಸೋಸಿದ ನೀರು ತೊಟ್ಟಿಯಲ್ಲಿ ಸಂಗ್ರಹವಾಗುವಂತೆ ಒಂದು ತೊಟ್ಟಿಯನ್ನು ನಿರ್ಮಾಣ ಮಾಡಬೇಕು. ಆ ತೊಟ್ಟಿಗೆ 25 ಅಥವಾ 30 ಮಿ.ಮೀ. ಪಿವಿಸಿ ಪೈಪನ್ನು ಅಳವಡಿಸಿ ಅದನ್ನು ನೇರವಾಗಿ ಕೇಸಿಂಗ್ ಪೈಪಿಗೆ ( ಇದರ ಜೊತೆಗೆ ಸುಮಾರು 1.5 ಮೀ. ಕೆಳಗೆ ) ರಂಧ್ರ ಮಾಡಿ ಅಳವಡಿಸಬೇಕು. ಇಂಗು ಗುಂಡಿಯನ್ನು ಈ ರೀತಿ ವಿನ್ಯಾಸಗೊಳಿಸುವುದರಿಂದ ಬಾವಿಯಲ್ಲಿ ತ್ವರಿತವಾಗಿ ಜಲ ಮರುಪೂರಣವಾಗುತ್ತದೆ. ಮಳೆ ಬರುವ ಸಂದರ್ಭದಲ್ಲಿ ಹರಿದು ಬರುವ ನೀರನ್ನು ಕಾಲುವೆ ಮೂಲಕ ಒಂದೇ ಮಾರ್ಗವಾಗಿ ತೊಟ್ಟಿಯಲ್ಲಿ ಶೇಖರಣೆಗೊಂಡಿರುವ ನೀರನ್ನು ನಿಧಾನವಾಗಿ ಶೋಧಿಸಿ ಬಿಡಬೇಕು. ಕೇಸಿಂಗ್ ಪೈಪ್‍ಗೆ ನೇರ ಸಂಪರ್ಕವಿರುವದರಿಂದ ನೀರು ಶೀಘ್ರದಲ್ಲಿ ಆಳ ಸೇರಿ ನೀರಿನ ಸೆಲೆಯನ್ನು ಸೇರಿಸಿ ಹೆಚ್ಚು ನೀರು ವೃದ್ಧಿಯಾಗಲು ಮಾಡುವುದರಿಂದ ಇನ್ನೂ ಹೆಚ್ಚು ನೀರು ಅಂತರ್ಜಲಕ್ಕೆ ಸೇರಿಸಲು ಅನುಕೂಲವಾಗುತ್ತದೆ.

ಮೇಲ್ಚಾವಣಿ ಮಳೆ ನೀರು ಸಂಗ್ರಹಣೆ

ಮನೆಯ ಮೇಲ್ಚಾವಣಿಯ ಮೇಲೆ ಮಳೆ ಬಂದಾಗ ಬಿದ್ದಂತಹ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ದಿನನಿತ್ಯದ ಬಳಕೆಗೆ ಉಪಯೋಗಿಸುವುದು ಕೂಡ ಮಳೆ ನೀರು ಕೊಯ್ಲಿನ ಪ್ರಮುಖ ಅಂಗವಾಗಿದೆ. ಮೇಲ್ಛಾವಣಿ ನೀರು ಅತೀ ಪರಿಶಿದ್ಧವಾಗಿರುವುದು. ಈ ನೀರನ್ನು ಸಂಗ್ರಹಿಸಿ ಕೊಳವೆ ಬಾವಿ, ತೆರೆದ ಬಾವಿಗಳಿಗೆ ವರ್ಗಾಯಿಸಿ ಅಂತರ್ಜಲವನ್ನು ಹೆಚ್ಚಿಸಬಹುದು.

ಮೇಲ್ಛಾವಣಿಯಿಂದ ನೀರನ್ನು ಶೇಖರಿಸುವಾಗ ಮೇಲ್ಚಾವಣಿಯು ಸ್ವಚ್ಚವಾಗಿರಬೇಕು. ಈ ನೀರು ಕೊಳವೆಯನ್ನು ಒಂದು ಸೇರುವಲ್ಲಿ ಕಟ್ಟಿಣದ ಜಾಳಿಗೆಯನ್ನು ಇಟ್ಟು ಇತರ ವಸ್ತಗಳು ಅಲ್ಲಿಯೇ ಉಳಿದು ನೀರು ಮಾತ್ರ ಕೊಳವೆ ಮುಖಾಂತರ ಸಂಗ್ರಹವಾಗುವುದರಲ್ಲಿ ಸೇರುವುದು. ವಿವಿಧ ರೀತಿಯ ಮೇಲ್ಚಾವಣಿಗಳಿಗೆ ತಕ್ಕಂತೆ ನುರಿತ ವ್ಯಕ್ತಗಳ ಸಲಹೆ ಮೇರೆಗೆ ನೀರು ಸಂಗ್ರಹಣೆ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದು.

ಮೂಲ : ದೂರ ಶಿಕ್ಷಣ ಘಟಕ

ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ

ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

ಕೊನೆಯ ಮಾರ್ಪಾಟು : 6/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate